ಹಿಂಗೋಲಿ, ಆಗಸ್ಟ್ 29: ವಿದ್ಯಾರ್ಥಿಗಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಅವಧಿ ಮೀರಿದ ಆಹಾರ ಪೊಟ್ಟಣಗಳು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಅವುಂದಾ ಸರ್ಕಾರಿ ಶಾಲೆಯಲ್ಲಿ ಪತ್ತೆಯಾಗಿವೆ. ಶಾಲೆಯ ತಪಾಸಣೆ ವೇಳೆ ಕೆಟ್ಟುಹೋದ ನೀರಿನ ಫಿಲ್ಟರ್ ಹಾಗೂ ಶೌಚಗೃಹಗಳಲ್ಲಿ ನೀರಿನ ಕೊರತೆಯೂ ಬೆಳಕಿಗೆ ಬಂದಿದೆ.
ಸಿಜೆಪಿಯ ‘ಸ್ಕೂಲ್ ಠೀಕ್ ಕರ್ದೊ’ ಅಭಿಯಾನದ ಭಾಗವಾಗಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ತಮ್ಮ ತವರು ಜಿಲ್ಲೆಯ ಅವುಂದಾ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ನೀಡಲು ಸಂಗ್ರಹಿಸಲಾಗಿದ್ದ ಆಹಾರದ ಪೊಟ್ಟಣಗಳ ಅವಧಿ ಫೆಬ್ರುವರಿಯಲ್ಲೇ ಮುಗಿದಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಬಡ ಮಕ್ಕಳಿಗೆ ಅವಧಿ ಮೀರಿದ ಆಹಾರ ಏಕೆ?
ಶಾಲೆಯಲ್ಲಿ ಪತ್ತೆಯಾದ ಆಹಾರದ ಪೊಟ್ಟಣಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ದೀಪ್ಕೆ, “ಫೆಬ್ರುವರಿಯಲ್ಲೇ ಅವಧಿ ಮುಗಿದಿರುವ ಪೊಟ್ಟಣಗಳಿಂದ ವಿದ್ಯಾರ್ಥಿಗಳ ಆಹಾರ ತಯಾರಿಸಲಾಗುತ್ತಿದೆ. ಬಡ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುವುದು ಎಷ್ಟು ಸರಿ? ಇದೇ ಆಹಾರವನ್ನು ಸಚಿವರ ಮಕ್ಕಳಿಗೆ ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಶಾಲೆಯ ಓವರ್ಹೆಡ್ ಟ್ಯಾಂಕ್ ಹಾಗೂ ನೀರಿನ ವ್ಯವಸ್ಥೆಯನ್ನೂ ಅವರು ಪರಿಶೀಲಿಸಿದರು. ನೀರಿನ ಫಿಲ್ಟರ್ ಕೆಟ್ಟುಹೋಗಿರುವುದರಿಂದ ವಿದ್ಯಾರ್ಥಿಗಳು ಕೊಳವೆಬಾವಿಯ ನೀರನ್ನೇ ಕುಡಿಯುತ್ತಿರುವುದು ಹಾಗೂ ಶೌಚಗೃಹಗಳಲ್ಲಿ ನೀರಿನ ಪೂರೈಕೆ ಇಲ್ಲದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ನಾಲ್ಕನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 87 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗಾಗಿ ಕೇವಲ ಎರಡು ಕೊಠಡಿಗಳಿವೆ ಎಂದು ದೀಪ್ಕೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆಗಸ್ಟ್ 15ರಿಂದ ಸಿಜೆಪಿ ವತಿಯಿಂದ ‘ಸ್ಕೂಲ್ ಠೀಕ್ ಕರ್ದೊ’ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನು ಗುರುತಿಸಿ ಸರ್ಕಾರದ ಗಮನಕ್ಕೆ ತರುವುದು ಹಾಗೂ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸುವುದು ಅಭಿಯಾನದ ಉದ್ದೇಶವಾಗಿದೆ.