ಹೊಸದಿಲ್ಲಿ, ಸೆ 12 : (ಸಮದರ್ಶಿ ಸುದ್ದಿ) - ಪಶ್ಚಿಮ ಏಷ್ಯಾದ ಸಂಘರ್ಷದ ಕುರಿತು ಜಂಟಿ ಹೇಳಿಕೆಯಲ್ಲಿ ಬಳಸಬೇಕಾದ ಭಾಷೆಗೆ ಸಂಬಂಧಿಸಿ ಸದಸ್ಯ ರಾಷ್ಟ್ರಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ನಿವಾರಿಸುವಲ್ಲಿ ಬ್ರಿಕ್ಸ್ ಯಶಸ್ವಿಯಾಗಿದೆ. ಸುದೀರ್ಘ ಮಾತುಕತೆಗಳ ಬಳಿಕ ಜಂಟಿ ಹೇಳಿಕೆಗೆ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಈ ಒಮ್ಮತ ಮೂಡಿರುವುದು ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಾಗಿದೆ. ವಿಸ್ತರಿತ ಬ್ರಿಕ್ಸ್ ಒಕ್ಕೂಟದ ಭಾಗವಾಗಿರುವ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ವಿಭಿನ್ನ ನಿಲುವು ಹೊಂದಿರುವುದರಿಂದ ಜಂಟಿ ಹೇಳಿಕೆ ಸಿದ್ಧಪಡಿಸುವ ಪ್ರಕ್ರಿಯೆ ಕಠಿಣವಾಗಿತ್ತು.
ಇರಾನ್–ಯುಎಇ ಭಿನ್ನ ನಿಲುವು
ಇರಾನ್ ಮೇಲಿನ ಏಕಪಕ್ಷೀಯ ದಾಳಿಯನ್ನು ಜಂಟಿ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಹಾಗೂ ಅದು ವಿಶ್ವಸಂಸ್ಥೆಯ ಸನ್ನದಿನ ಉಲ್ಲಂಘನೆಯಾಗಿದೆ ಎಂಬ ಅಂಶವನ್ನು ಸೇರಿಸಬೇಕು ಎಂದು ಇರಾನ್ ಪಟ್ಟು ಹಿಡಿದಿತ್ತು.
ಇನ್ನೊಂದೆಡೆ, ಇರಾನ್ ತನ್ನ ಸಾರ್ವಭೌಮತ್ವ ಮತ್ತು ಭೌಗೋಳಿಕ ಪ್ರದೇಶದ ಮೇಲೆ ದಾಳಿ ನಡೆಸಿದೆ ಎಂಬ ಯುಎಇ ನಿಲುವಿಗೂ ಜಂಟಿ ಹೇಳಿಕೆಯಲ್ಲಿ ಸೂಕ್ತ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಯಾವುದೇ ಒಂದು ರಾಷ್ಟ್ರದ ನಿಲುವಿಗೆ ಆದ್ಯತೆ ನೀಡದೆ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಅಂತಾರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಸನ್ನದಿನ ಪಾಲನೆಗೆ ಸಂಬಂಧಿಸಿದ ಅಂಶಗಳನ್ನು ವ್ಯಾಪಕ ಭಾಷೆಯಲ್ಲಿ ಸೇರಿಸುವ ಕುರಿತು ಮಾತುಕತೆ ನಡೆದಿದೆ. ತನ್ನ ನಿರ್ದಿಷ್ಟ ನಿಲುವನ್ನು ಸಾಮಾನ್ಯ ಹೇಳಿಕೆಯೊಳಗೆ ಸೇರಿಸುವ ಪ್ರಯತ್ನಕ್ಕೆ ಇರಾನ್ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.
ಇರಾನ್ ಸಂಘರ್ಷದಲ್ಲಿ ತಾನು ಯಾವುದೇ ಪಾತ್ರ ವಹಿಸಿದೆ ಎಂಬ ಆರೋಪವನ್ನು ಯುಎಇ ತಿರಸ್ಕರಿಸಿದೆ. ಇರಾನ್ ನಡೆಸಿದ ದಾಳಿಗಳು ವಿಶ್ವಸಂಸ್ಥೆಯ ಸನ್ನದು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿವೆ ಎಂದು ಯುಎಇ ಪ್ರತಿಪಾದಿಸಿದೆ.
ಮತ್ತೊಂದೆಡೆ, ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ತಮ್ಮ ಪ್ರದೇಶದಲ್ಲಿರುವ ಅಮೆರಿಕದ ಸೇನಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಕೆಲವು ಕೊಲ್ಲಿ ರಾಷ್ಟ್ರಗಳು ಅವಕಾಶ ನೀಡಿವೆ ಎಂದು ಇರಾನ್ ಆರೋಪಿಸಿದೆ. ತನ್ನ ಪ್ರತಿದಾಳಿ ಅಮೆರಿಕದ ಸೇನಾ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು ಎಂದು ಇರಾನ್ ಸಮರ್ಥಿಸಿಕೊಂಡಿದೆ.
ಗಾಜಾ ಪ್ಯಾಲೆಸ್ತೀನ್ನ ಅವಿಭಾಜ್ಯ ಅಂಗ
ಪ್ಯಾಲೆಸ್ತೀನ್ ವಿಚಾರದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯ ಕಂಡುಬಂದಿಲ್ಲ. 2025ರ ರಿಯೊ ಘೋಷಣೆಯಲ್ಲಿ ಗಾಜಾವನ್ನು ‘ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಅವಿಭಾಜ್ಯ ಅಂಗ’ ಎಂದು ಉಲ್ಲೇಖಿಸಲಾಗಿದ್ದು, ಅದೇ ನಿಲುವನ್ನು ಮುಂದುವರಿಸಲು ಬಹುತೇಕ ಸದಸ್ಯ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.
ಗಾಜಾ ಮತ್ತು ಪಶ್ಚಿಮ ದಂಡೆ ಪ್ರದೇಶಗಳನ್ನು ಪ್ಯಾಲೆಸ್ತೀನ್ ಪ್ರಾಧಿಕಾರದ ಅಡಿಯಲ್ಲಿ ಒಗ್ಗೂಡಿಸುವ ವಿಚಾರವನ್ನೂ ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ತೀವ್ರ ಭಿನ್ನಾಭಿಪ್ರಾಯಗಳ ನಡುವೆಯೂ ಸುದೀರ್ಘ ಮಾತುಕತೆ ನಡೆಸಿ ಜಂಟಿ ಹೇಳಿಕೆಗೆ ಒಮ್ಮತ ಮೂಡಿಸಿರುವುದು ಶೃಂಗಸಭೆಯ ಅಂತಿಮ ಫಲಿತಾಂಶ ರೂಪಿಸುವಲ್ಲಿ ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊರೆತ ಮಹತ್ವದ ಯಶಸ್ಸು ಎಂದು ಪರಿಗಣಿಸಲಾಗಿದೆ.