ಧಾರವಾಡ, ಜುಲೈ 1: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಪತ್ನಿ ದಪ್ಪಗಿದ್ದಾಳೆ ಎಂಬ ಕಾರಣ ಹೇಳಿ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಪತಿ ಬಸವರಾಜ ವಡ್ಡರನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ ಕಮಲಾಕರ (29) ಎಂದು ಗುರುತಿಸಲಾಗಿದೆ. 2024ರಲ್ಲಿ ಬಸವರಾಜ ಮತ್ತು ಪ್ರಿಯಾಂಕಾ ವಿವಾಹವಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ತವರು ಮನೆಯಿಂದ ಹಣ ಹಾಗೂ ಚಿನ್ನ ತರುವಂತೆ ಒತ್ತಾಯಿಸುತ್ತಿದ್ದ ಆರೋಪಿಯು, "ನೀನು ದಪ್ಪಗಿದ್ದೀಯ, ಗರ್ಭಿಣಿಯಾಗುವುದಿಲ್ಲ" ಎಂದು ಅವಮಾನಿಸುತ್ತಿದ್ದನೆಂದು ಮೃತಳ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಇದೇ ವಿಚಾರವನ್ನು ನೆಪ ಮಾಡಿಕೊಂಡು ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಎರಡು ದಿನಗಳ ಹಿಂದೆಯೇ ನಡೆದಿದ್ದರೂ, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆರೋಪಿಯು ಪ್ರಿಯಾಂಕಾ ಸಾವಿನ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಮಾಹಿತಿ ತಿಳಿದ ಮೃತಳ ಪೋಷಕರು ಕಲಬುರಗಿಯಿಂದ ನವಲಗುಂದಕ್ಕೆ ಆಗಮಿಸಿ, ಮಂಗಳವಾರ ತಡರಾತ್ರಿ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ನವಲಗುಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆಗೆ ನಿಖರ ಕಾರಣ ಹಾಗೂ ಇತರೆ ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.