
ಗೋಕಾಕ, 17: ವಿಧವೆಯೊಬ್ಬಳೊಂದಿಗೆ ಹೊಂದಿದ್ದ ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಪತ್ನಿಯನ್ನು ಕೊಲೆ ಮಾಡಿ ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಶಿಂದಿಕುರಬೇಟ ಗ್ರಾಮದ ಸಕ್ಕುಬಾಯಿ ಪಟಾಯತ್ ಮೃತಪಟ್ಟ ಮಹಿಳೆಯಾಗಿದ್ದು, ಪತಿ ಸಂತೋಷ ಪಟಾಯತ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪತ್ನಿಯ ಹತ್ಯೆಗೆ ಪೂರ್ವಯೋಜಿತ ಸಂಚು ರೂಪಿಸಲಾಗಿತ್ತು ಎಂಬ ಅಂಶಗಳು ಹೊರಬಿದ್ದಿವೆ.
ಅಧಿಕ ಮಾಸದ ಹಿನ್ನೆಲೆಯಲ್ಲಿ ಪತ್ನಿಯೊಂದಿಗೆ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ಸಂತೋಷ, ವಾಪಸ್ ಬರುವಾಗ ತಂಪುಪಾನೀಯದಲ್ಲಿ ಇಲಿ ಪಾಷಾಣ ಮತ್ತು ಬಳೆಯ ಚೂರುಗಳನ್ನು ಬೆರೆಸಿದ್ದಾನೆ ಎನ್ನಲಾಗಿದೆ. ಅದನ್ನು ದೇವಿಯ ಪ್ರಸಾದವೆಂದು ನಂಬಿಸಿ ಸಕ್ಕುಬಾಯಿಗೆ ಕುಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂಪುಪಾನೀಯ ಸೇವಿಸಿದ ಬಳಿಕ ಸಕ್ಕುಬಾಯಿ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಾಗ, ರಸ್ತೆ ಮಧ್ಯೆಯೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಘಟನೆಯನ್ನು ಅಪಘಾತವೆಂದು ಬಿಂಬಿಸುವ ಉದ್ದೇಶದಿಂದ ಬೈಕ್ ಅನ್ನು ಮೃತಳ ಮೇಲೆಯೇ ಹಾಕಿ ನಾಟಕವಾಡಿದ್ದಾನೆ ಎನ್ನಲಾಗಿದೆ.
ಸುಮಾರು ಎರಡು-ಮೂರು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ಬಿದ್ದಿದ್ದ ಆರೋಪಿಯು ಬಳಿಕ ತಾನೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಅಪಘಾತ ಸಂಭವಿಸಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಅನುಮಾನ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಸಾವಿಗೆ ಅಪಘಾತ ಕಾರಣವಲ್ಲ, ಹತ್ಯೆಯೇ ಕಾರಣ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂತೋಷನನ್ನು ವಶಕ್ಕೆ ಪಡೆದು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸುಮಾರು ಒಂಭತ್ತು ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಸಕ್ಕುಬಾಯಿ ಅವರನ್ನು ವಿವಾಹವಾಗಿದ್ದ ಸಂತೋಷ, ಕಳೆದ ನಾಲ್ಕು ವರ್ಷಗಳಿಂದ ತನ್ನದೇ ಗ್ರಾಮದ ವಿಧವೆಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರೇಯಸಿಯೊಂದಿಗೆ ಜೀವನ ನಡೆಸುವ ಉದ್ದೇಶದಿಂದಲೇ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಆರೋಪಿ ಹಿಂಡಲಗಾ ಕಾರಾಗೃಹಕ್ಕೆ ರವಾನೆಯಾಗಿದ್ದು, ಈ ಪ್ರಕರಣದಲ್ಲಿ ಸಂಬಂಧಿತ ವಿಧವೆಯ ಪಾತ್ರವಿದೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ