ಹೊಸದಿಲ್ಲಿ, ಸೆ 10 : (ಸಮದರ್ಶಿ ಸುದ್ದಿ) - ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಮತ್ತೊಮ್ಮೆ ಗಾಯಗೊಂಡಿದ್ದು, ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಏಷ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದಾರೆ.
ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉತ್ಕೃಷ್ಟತಾ ಕೇಂದ್ರದಲ್ಲಿ ನಡೆದ ಕಡ್ಡಾಯ ಫಿಟ್ನೆಸ್ ಪರೀಕ್ಷೆಯ ವೇಳೆ ಹರ್ಷಿತ್ ರಾಣಾ ಅವರಿಗೆ ಮತ್ತೆ ಸ್ನಾಯು ಸೆಳೆತದ ಗಾಯ ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಆಡಲು ಅನುಮತಿ ನೀಡಲಾಗಿಲ್ಲ.
ಹರ್ಷಿತ್ ಬದಲಿಗೆ ವಿದರ್ಭದ ವೇಗದ ಬೌಲರ್ ಯಶ್ ಠಾಕೂರ್ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಸರಣಿ ಹಾಗೂ ಏಷ್ಯನ್ ಗೇಮ್ಸ್ಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಹರ್ಷಿತ್ ರಾಣಾ ಈ ವರ್ಷದ ಟಿ20 ವಿಶ್ವಕಪ್ಗೂ ಮುನ್ನ ಅಭ್ಯಾಸ ಪಂದ್ಯದ ವೇಳೆ ಇದೇ ರೀತಿಯ ಗಾಯಕ್ಕೆ ಒಳಗಾಗಿದ್ದರು. ಪರಿಣಾಮ ವಿಶ್ವಕಪ್ ಹಾಗೂ 2026ರ ಐಪಿಎಲ್ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿದ್ದರು. ಬಳಿಕ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ವೇಳೆ ತಂಡಕ್ಕೆ ಮರಳಿದ್ದರೂ, ಮತ್ತೆ ಗಾಯಗೊಂಡ ಕಾರಣ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿದಿದ್ದರು.
ಇದೇ ವೇಳೆ ಭಾರತ ತಂಡಕ್ಕೆ ಸಮಾಧಾನಕರ ಸುದ್ದಿ ಲಭಿಸಿದೆ. ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ಗಳಾದ ವಾಷಿಂಗ್ಟನ್ ಸುಂದರ್ ಮತ್ತು ನಿತೀಶ ಕುಮಾರ ರೆಡ್ಡಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶನಿವಾರ ದಿಲ್ಲಿಯಲ್ಲಿ ನಡೆಯಲಿದೆ. ಬಳಿಕ ಭಾರತ ತಂಡ ಜಪಾನ್ ವಿರುದ್ಧ ಒಂದು ಟಿ20 ಪಂದ್ಯ ಆಡಲಿದ್ದು, ಸೆಪ್ಟೆಂಬರ್ 28ರಂದು ಏಷ್ಯನ್ ಗೇಮ್ಸ್ನಲ್ಲಿ ತನ್ನ ಚಿನ್ನದ ಪದಕ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದೆ.