ಹೊಸದಿಲ್ಲಿ, ಸೆ. 16 : ₹2,000ಕ್ಕಿಂತ ಹೆಚ್ಚಿನ ಕೆಲವು ಯುಪಿಐ ವ್ಯಾಪಾರಿ ವಹಿವಾಟುಗಳಿಗೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿಧಿಸುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇದನ್ನು ‘ಯುಪಿಐ ಟ್ಯಾಕ್ಸ್’ ಎಂದು ಕರೆದಿದ್ದು, ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಉಲ್ಲೇಖಿಸಿದ ರಾಹುಲ್, ಅವರು ‘ಎಡಕ್ಕೂ ವಾಲುವುದಿಲ್ಲ, ಬಲಕ್ಕೂ ವಾಲುವುದಿಲ್ಲ, ನೇರವಾಗಿ ನಿಲ್ಲುತ್ತೇನೆ’ ಎಂದಿದ್ದರು ಎಂದು ಅಮೇರಿಕಕ್ಕೆ ಹೇಳಿದ್ದನ್ನು ನೆನಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಮಣಿಯುತ್ತಿದ್ದಾರೆ, ಅಮೆರಿಕದ ಒತ್ತಡಕ್ಕೆ ಮಣಿಯದೆ ಇಂದಿರಾ ರೀತಿ ನೇರವಾಗಿ ನಿಲ್ಲಬೇಕು ಎಂದರು. ಅಮೆರಿಕದ ಒತ್ತಡದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ರಾಹುಲ್ ಹಾಗೂ ಕಾಂಗ್ರೆಸ್ನ ಆರೋಪವಾಗಿದೆ.
ಹೊಸ ವ್ಯವಸ್ಥೆಯಡಿ ಅಕ್ಟೋಬರ್ 15ರಿಂದ ₹2,000 ಮೀರಿದ ನಿರ್ದಿಷ್ಟ ವ್ಯಕ್ತಿಯಿಂದ-ವ್ಯಾಪಾರಿಗೆ (ಪಿ2ಎಂ) ಯುಪಿಐ ಪಾವತಿಗಳಿಗೆ ಶೇ.0.4 ಎಂಡಿಆರ್ ಅನ್ವಯವಾಗಲಿದೆ. ₹75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300 ಮಿತಿ ಇರಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಹಣ ವರ್ಗಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ.
ವ್ಯಾಪಾರಿಗಳ ಮೇಲೆ ವಿಧಿಸುವ ಎಂಡಿಆರ್ ಹೊರೆ ಅಂತಿಮವಾಗಿ ಸರಕು ಮತ್ತು ಸೇವೆಗಳ ಬೆಲೆಗಳ ಮೂಲಕ ಗ್ರಾಹಕರ ಮೇಲೆ ಬೀಳಬಹುದು ಎಂದು ರಾಹುಲ್ ವಾದಿಸಿದ್ದಾರೆ. ₹2,000 ಮೀರಿದ ವ್ಯಾಪಾರಿ ಯುಪಿಐ ವಹಿವಾಟುಗಳು ಸಂಖ್ಯೆಯಲ್ಲಿ ಕಡಿಮೆ ಪ್ರಮಾಣದಲ್ಲಿದ್ದರೂ, ಒಟ್ಟು ವಹಿವಾಟಿನ ಮೌಲ್ಯದಲ್ಲಿ ಹೆಚ್ಚಿನ ಪಾಲು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಆಗಸ್ಟ್ನಲ್ಲಿ ₹2,000 ಮೀರಿದ ಪಿ2ಎಂ ವಹಿವಾಟುಗಳು ಸಂಖ್ಯೆಯಲ್ಲಿ ಸುಮಾರು ಶೇ.4ರಷ್ಟಿದ್ದು, ಮೌಲ್ಯದಲ್ಲಿ ಶೇ.67ರಷ್ಟು ಪಾಲು ಹೊಂದಿದ್ದವು.