LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಇರಾನ್‌ ಶಾಂತಿ ಪ್ರಸ್ತಾವನೆ ತಿರಸ್ಕರಿಸಿದ ಟ್ರಂಪ್‌

ವಾಷಿಂಗ್ಟನ್‌, ಮೇ 11 : ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಇರಾನ್‌ ನೀಡಿದ್ದ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಿರಸ್ಕರಿಸಿದ್ದು, ಅದರಲ್ಲಿರುವ ಅಂಶಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಫೆಬ್ರವರಿ 28ರಿಂದ ಆರಂಭವಾದ ಅಮೆರಿಕ-ಇರಾನ್‌ ಸಂಘರ್ಷಕ್ಕೆ ತೆರೆ ಬೀಳಬಹುದು ಎಂಬ ನಿರೀಕ್ಷೆಗಳ ನಡುವೆ ಟ್ರಂಪ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಪ್ರಸ್ತಾವನೆಯ ವಿವರಗಳನ್ನು ಬಹಿರಂಗಪಡಿಸದ ಟ್ರಂಪ್‌, ಅದು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್‌ ಪ್ರತಿನಿಧಿಗಳ ಪ್ರತಿಕ್ರಿಯೆಯನ್ನು ಓದಿದ್ದೇನೆ. ಅದು ನನಗೆ ಇಷ್ಟವಾಗಿಲ್ಲ. ಅದು ಸಂಪೂರ್ಣವಾಗಿ ಒಪ್ಪಲಾಗದಂತದ್ದು ಎಂದು ಟ್ರಂಪ್‌ ತಮ್ಮ ಟ್ರೂತ್‌ ಸೋಶಿಯಲ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟೆಹರಾನ್‌ ಕಳೆದ ಹಲವು ದಶಕಗಳಿಂದ ಅಮೆರಿಕದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್‌, ಅವರು ಈಗ ನಗುವುದಿಲ್ಲ ಎಂದು ಟೀಕಿಸಿದ್ದರು.

ಅಮೆರಿಕದ ಮಾಧ್ಯಮ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಟ್ರಂಪ್‌, ಇರಾನ್‌ ಕಳುಹಿಸಿರುವ ಪತ್ರ ಸೂಕ್ತವಾಗಿಲ್ಲ. ಅದರಲ್ಲಿರುವ ವಿಷಯಗಳು ನನಗೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಇದರ ಮಧ್ಯೆ, ಇರಾನ್‌ ವಿರುದ್ಧ ಅಮೆರಿಕ ಮಿಲಿಟರಿ ಕ್ರಮವನ್ನೂ ಪರಿಗಣಿಸಬೇಕಾದ ಸಮಯ ಬಂದಿದೆ ಎಂದು ರಿಪಬ್ಲಿಕನ್‌ ಸೆನೆಟರ್‌ ಲಿಂಡ್ಸೆ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷ ಟ್ರಂಪ್‌ ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಆದರೆ ಅಂತರರಾಷ್ಟ್ರೀಯ ಹಡಗು ಸಾಗಣೆ ಮೇಲೆ ಇರಾನ್‌ ನಡೆಸುತ್ತಿರುವ ದಾಳಿಗಳು, ಮಧ್ಯಪ್ರಾಚ್ಯದ ಮಿತ್ರ ರಾಷ್ಟ್ರಗಳ ಮೇಲಿನ ನಿರಂತರ ಬೆದರಿಕೆಗಳು ಹಾಗೂ ಅಮೆರಿಕದ ಪ್ರಸ್ತಾವನೆಗೆ ನೀಡಿರುವ ಅಸ್ವೀಕಾರಾರ್ಹ ಪ್ರತಿಕ್ರಿಯೆ ಗಮನಿಸಿದರೆ ಈಗ ಬೇರೆ ಮಾರ್ಗವನ್ನೂ ಪರಿಗಣಿಸುವ ಅಗತ್ಯವಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವೆ ಯುದ್ಧ ಶಾಶ್ವತವಾಗಿ ಅಂತ್ಯಗೊಳಿಸುವ ಕುರಿತು ಮಾತುಕತೆಗಳು ಮುಂದುವರಿದಿದ್ದರೂ, ಶಾಂತಿ ಒಪ್ಪಂದ ಇನ್ನೂ ದೂರದಲ್ಲೇ ಇದೆ.

ಇರಾನ್‌ ತನ್ನ ಯುರೇನಿಯಂ ಸಮೃದ್ಧೀಕರಣ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸುವ ಸ್ಪಷ್ಟ ಭರವಸೆ ನೀಡಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ಬದಲಾಗಿ ಇರಾನ್‌ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದು ಹಾಗೂ ಘನೀಕೃತ ನಿಧಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವಿಶ್ವದ ಕಚ್ಚಾ ತೈಲ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಹಾರ್ಮುಜ್‌ ಜಲಸಂಧಿಯ ದಿಗ್ಬಂಧನ ತೆರವುಗೊಳಿಸುವ ವಿಷಯವೂ ಉಭಯ ರಾಷ್ಟ್ರಗಳ ಮಾತುಕತೆಯ ಪ್ರಮುಖ ಅಂಶವಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST