ಹಾವೇರಿ, ಸೆ. 19 : ಕಲ್ಲು ಗಣಿಗಾರಿಕೆ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ₹3.43 ಕೋಟಿ ದಂಡ ವಿಧಿಸಿದೆ.
ವಿರೂಪಾಕ್ಷಪ್ಪ ಬಳ್ಳಾರಿ ಅವರು ‘ವಿ.ಆರ್. ಬಳ್ಳಾರಿ’ ಹೆಸರಿನಲ್ಲಿ ಎರಡು ಕಡೆ ಕ್ವಾರಿ ನಡೆಸಲು ಗುತ್ತಿಗೆ ಪರವಾನಗಿ ಪಡೆದಿದ್ದರು. ಆದರೆ, ಪರವಾನಗಿಯಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಮೀರಿ ಗಣಿಗಾರಿಕೆ ನಡೆಸಿರುವುದು ಪತ್ತೆಯಾಗಿದ್ದು, ₹3.43 ಕೋಟಿ ದಂಡ ವಿಧಿಸಿ ನೋಟಿಸ್ ನೀಡಲಾಗಿದೆ. ದಂಡದ ಮೊತ್ತವನ್ನು ಆರು ತಿಂಗಳೊಳಗೆ ಪಾವತಿಸುವಂತೆಯೂ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪರವಾನಗಿಯಲ್ಲಿ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ 3,84,161 ಟನ್ ಕಲ್ಲನ್ನು ಹೆಚ್ಚುವರಿಯಾಗಿ ತೆಗೆದು ಸಾಗಿಸಲಾಗಿದೆ ಎಂಬ ಆರೋಪವಿದೆ. ಅಲ್ಲದೆ, ನಿಗದಿತ ಪ್ರದೇಶದ ಹೊರಗೆ ಅಕ್ಕಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು 53,410 ಟನ್ ಕಲ್ಲು ತೆಗೆದಿರುವುದು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ (ಕೆಎಸ್ಆರ್ಎಸ್ಎಸಿ) ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ ಅವರ ಸಹೋದರ ಎಸ್.ಆರ್. ಬಳ್ಳಾರಿ ಅವರಿಗೂ ₹1.23 ಕೋಟಿ ದಂಡ ವಿಧಿಸಲಾಗಿದೆ. ಅವರು ನಿಗದಿತ ಪ್ರಮಾಣಕ್ಕಿಂತ 1,76,313 ಟನ್ ಕಲ್ಲನ್ನು ಹೆಚ್ಚುವರಿಯಾಗಿ ಹಾಗೂ ಒತ್ತುವರಿ ಪ್ರದೇಶದಿಂದ 50,401 ಟನ್ ಕಲ್ಲನ್ನು ತೆಗೆದಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.