LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಡೇಟಾ ಸೆಂಟರ್ ಕ್ಷೇತ್ರಕ್ಕೆ ₹1,300 ಕೋಟಿ ಪ್ರೋತ್ಸಾಹ

ಮಂಗಳೂರು, ಸೆ. 18 : (ಸಮದರ್ಶಿ ಸುದ್ದಿ) - ಕರ್ನಾಟಕವನ್ನು ದೇಶದ ಪ್ರಮುಖ ಸುಸ್ಥಿರ ಡೇಟಾ ಸೆಂಟರ್ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ **‘ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–31’**ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಐದು ವರ್ಷಗಳಲ್ಲಿ ₹1,300.45 ಕೋಟಿ ಪ್ರೋತ್ಸಾಹಕ ಚೌಕಟ್ಟು ಒದಗಿಸುವ ಈ ನೀತಿಯಡಿ 2031ರ ವೇಳೆಗೆ ರಾಜ್ಯದಲ್ಲಿ ಡೇಟಾ ಸೆಂಟರ್ ಸಾಮರ್ಥ್ಯವನ್ನು 1 ಗಿಗಾವ್ಯಾಟ್‌ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಮಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹೊಸ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಹೊಸ ನೀತಿಯಡಿ ಬೆಂಗಳೂರು ಕೇಂದ್ರಿತ ಡೇಟಾ ಸೆಂಟರ್ ಹೂಡಿಕೆಯನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲು ಆದ್ಯತೆ ನೀಡಲಾಗಿದ್ದು, ಮಂಗಳೂರು ಮತ್ತು ಮೈಸೂರು ಸೇರಿದಂತೆ ಬೆಂಗಳೂರಿನ ಹೊರಗಿನ ನಗರಗಳಲ್ಲಿಯೂ ಹೂಡಿಕೆ ಆಕರ್ಷಿಸಲು ಯೋಜಿಸಲಾಗಿದೆ.

₹1,300.45 ಕೋಟಿ ಪ್ರೋತ್ಸಾಹಕ ಚೌಕಟ್ಟು

2026ರಿಂದ 2031ರವರೆಗೆ ಜಾರಿಯಲ್ಲಿರುವ ನೀತಿಗಾಗಿ ಒಟ್ಟು ₹1,300.45 ಕೋಟಿ ಬಜೆಟ್ ಚೌಕಟ್ಟಿಗೆ ಅನುಮೋದನೆ ನೀಡಲಾಗಿದೆ. ಬಂಡವಾಳ ಹೂಡಿಕೆ, ಎಡ್ಜ್ ಡೇಟಾ ಸೆಂಟರ್‌ಗಳು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯ, ಮೌಲ್ಯ ಸರಪಳಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆಗೆ ಸಂಬಂಧಿಸಿದ ಪ್ರೋತ್ಸಾಹಕಗಳಿಗೆ ಇದರಲ್ಲಿ ಆದ್ಯತೆ ನೀಡಲಾಗಿದೆ.

ಹಣಕಾಸು ಇಲಾಖೆಯ ಪರಿಶೀಲನೆಯ ಬಳಿಕ ಬಂಡವಾಳ ಸಬ್ಸಿಡಿ, ವೀಲಿಂಗ್ ಶುಲ್ಕ ಮರುಪಾವತಿ, ಡಿಮ್ಯಾಂಡ್ ಸೆಂಟರ್ ಪ್ರೋತ್ಸಾಹ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಬೆಂಬಲ ಸೇರಿದಂತೆ ಕೆಲವು ಪ್ರೋತ್ಸಾಹಕಗಳಿಗೆ ಹೆಚ್ಚುವರಿಯಾಗಿ ₹206.50 ಕೋಟಿ ಪ್ರಸ್ತಾಪಿಸಲಾಗಿದ್ದು, ಇದರೊಂದಿಗೆ ನೀತಿಯ ಒಟ್ಟು ಬಜೆಟ್ ₹1,300.45 ಕೋಟಿಗೆ ನಿಗದಿಯಾಗಿದೆ ಎಂದು ಖರ್ಗೆ ತಿಳಿಸಿದ್ದಾರೆ.

2031ಕ್ಕೆ 1 ಗಿಗಾವ್ಯಾಟ್ ಸಾಮರ್ಥ್ಯದ ಗುರಿ

ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಐಒಟಿ, 5ಜಿ, ಬಿಗ್ ಡೇಟಾ ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಿಗೆ ಅಗತ್ಯವಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದು ನೀತಿಯ ಪ್ರಮುಖ ಗುರಿಯಾಗಿದೆ.

2031ರ ವೇಳೆಗೆ ಭಾರತದ ಎಐಗೆ ಸಜ್ಜಾದ ಡೇಟಾ ಸೆಂಟರ್ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕದ ಪಾಲನ್ನು ಶೇ.10ರಿಂದ 12ಕ್ಕೆ ತಲುಪಿಸುವುದು ಹಾಗೂ ರಾಜ್ಯದ ಡೇಟಾ ಸೆಂಟರ್ ಸಾಮರ್ಥ್ಯವನ್ನು 1 ಗಿಗಾವ್ಯಾಟ್‌ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಮಂಗಳೂರಿಗೆ ವಿಶೇಷ ಅವಕಾಶ

ಹೊಸ ನೀತಿಯಲ್ಲಿ ಮಂಗಳೂರನ್ನು ಡೇಟಾ ಸೆಂಟರ್ ಕ್ಷೇತ್ರದ ಪ್ರಮುಖ ಹೂಡಿಕೆ ತಾಣವಾಗಿ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಗುರುತಿಸಲಾಗಿದೆ. ಕರಾವಳಿಯ ಸಂಪರ್ಕ ವ್ಯವಸ್ಥೆ ಹಾಗೂ ಭವಿಷ್ಯದಲ್ಲಿ ಸಮುದ್ರದಡಿ ಕೇಬಲ್ ಲ್ಯಾಂಡಿಂಗ್ ಮೂಲಸೌಕರ್ಯ ಅಭಿವೃದ್ಧಿಯ ಸಾಧ್ಯತೆಯನ್ನು ಬಳಸಿಕೊಂಡು ಬೆಂಗಳೂರಿನ ಹೊರಗೂ ಡೇಟಾ ಸೆಂಟರ್ ಪರಿಸರ ವ್ಯವಸ್ಥೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಮಂಗಳೂರಿನಲ್ಲಿ ಸಮುದ್ರದಡಿ ಕೇಬಲ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಕುರಿತು ಈ ಹಿಂದೆಯೇ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಡೇಟಾ ಸೆಂಟರ್ ಪಾರ್ಕ್, ಅತ್ಯುತ್ತಮತಾ ಕೇಂದ್ರ

ಡೇಟಾ ಸೆಂಟರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡಲು ಡೇಟಾ ಸೆಂಟರ್ ಅತ್ಯುತ್ತಮತಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ನೀತಿಯಲ್ಲಿದೆ. ಇದರೊಂದಿಗೆ ಸುಸ್ಥಿರ ಡೇಟಾ ಸೆಂಟರ್ ವಲಯಗಳು ಹಾಗೂ ಡೇಟಾ ಸೆಂಟರ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಯಾವ ಪ್ರದೇಶಗಳಲ್ಲಿ ಡೇಟಾ ಸೆಂಟರ್ ಸ್ಥಾಪನೆಗೆ ಸೂಕ್ತವಾದ ಭೂಮಿ, ವಿದ್ಯುತ್, ನೀರು, ಸಂಪರ್ಕ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯ ಲಭ್ಯವಿದೆ ಎಂಬುದನ್ನು ಗುರುತಿಸಲು ‘ಸಂಪನ್ಮೂಲ ಲಭ್ಯತಾ ನಕ್ಷೆ’ ಸಿದ್ಧಪಡಿಸಲಾಗುತ್ತದೆ. ಇದರ ಆಧಾರದಲ್ಲಿ ಹೊಸ ಹೂಡಿಕೆಗಳಿಗೆ ಸೂಕ್ತ ಪ್ರದೇಶಗಳನ್ನು ಗುರುತಿಸಲಾಗುತ್ತದೆ.

ಹಸಿರು ಡೇಟಾ ಸೆಂಟರ್‌ಗಳಿಗೆ ಆದ್ಯತೆ

ಡೇಟಾ ಸೆಂಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಮತ್ತು ನೀರನ್ನು ಬಳಸುವುದರಿಂದ ಪರಿಸರದ ಮೇಲಿನ ಪರಿಣಾಮವನ್ನು ತಗ್ಗಿಸಲು ಹೊಸ ನೀತಿಯಲ್ಲಿ ವಿಶೇಷ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ನವೀಕರಿಸಬಹುದಾದ ಇಂಧನ ಬಳಕೆ, ಶಕ್ತಿ ದಕ್ಷತೆ, ನೀರಿನ ಸಮರ್ಥ ಬಳಕೆ, ಸುಧಾರಿತ ಕೂಲಿಂಗ್ ವ್ಯವಸ್ಥೆ, ತ್ಯಾಜ್ಯ ನೀರಿನ ಮರುಬಳಕೆ ಹಾಗೂ ಕಾರ್ಬನ್ ಉತ್ಸರ್ಜನೆ ತಗ್ಗಿಸುವ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

“ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್ ಮೂಲಸೌಕರ್ಯದ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಕರ್ನಾಟಕದ ಮುಂದಿನ ಹಂತದ ಡಿಜಿಟಲ್ ಬೆಳವಣಿಗೆ ಸುಸ್ಥಿರವಾಗಿರಬೇಕು. ಅದಕ್ಕಾಗಿ ವಿದ್ಯುತ್ ಮತ್ತು ನೀರಿನ ದಕ್ಷತೆ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಹಾಗೂ ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ಹೂಡಿಕೆಗೆ ಹೊಸ ನೀತಿಯಲ್ಲಿ ಒತ್ತು ನೀಡಲಾಗಿದೆ” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ : ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ ಮೆಟ್ಟಿಲೇರಿದ ಮಮತಾಹಾಲಿನ ಖರೀದಿ ದರ ಹೆಚ್ಚಳ ಕುರಿತ ರೈತರ ಒತ್ತಾಯಕ್ಕೆ ಶೀಘ್ರ ತೀರ್ಮಾನಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಗೌರವಶಾಲೆಯ ಮೆಟ್ಟಿಲಿನಲ್ಲಿ ಕಾಲುಜಾರಿ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವುಹಾವೇರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ₹3.43 ಕೋಟಿ ದಂಡಕನಿಷ್ಠ ವೇತನ ಜಾರಿಗೆ ತಡೆ ನೀಡಿದ್ದ ಸುತ್ತೋಲೆಗಳಿಗೆ ಹೈಕೋರ್ಟ ತಡೆಅನಾರೋಗ್ಯದ ಹಿನ್ನೆಲೆ ಕೆಎಲ್‌ಇ ಆಸ್ಪತ್ರೆ ಉದ್ಘಾಟನೆಗೆ ಅಮಿತ ಶಾ ಗೈರುಅವರಾದಿ ಗ್ರಾಪಂ ಕಚೇರಿಯಲ್ಲಿ ತಂದೆ-ಮಗಳ ಹತ್ಯೆ: ಮೂವರು ಆರೋಪಿಗಳ ಬಂಧನಮಮತಾ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನಮೋದಿ ಜನ್ಮದಿನವನ್ನು ‘ನಿರುದ್ಯೋಗ ದಿನ’ವಾಗಿ ಆಚರಿಸಿ ಕಾಂಗ್ರೆಸ್ ಪ್ರತಿಭಟನೆ