ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಿನ್ನದ ಆಸೆಗಾಗಿ ವೈದ್ಯನ ಕೊಲೆ: 24 ಗಂಟೆಯೊಳಗೆ ಹಂತಕನ ಬಂಧನ

ಶಿರಸಿ, ಏಪ್ರಿಲ್‌ 21 : ಮದುವೆ ಸಿದ್ಧತೆಯಲ್ಲಿದ್ದ ವೈದ್ಯನನ್ನು ಚಿನ್ನದ ಆಸೆಗೆ ಕೊಲೆಗೈದ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಕ್ಷಿಪ್ರವಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಡಾ. ರಮೇಶ ಕಲಗುಟಕರ (51) ಹತ್ಯೆ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮಂಜುನಾಥ ಪಿ.ಎಲ್‌. (70) ಬಂಧಿತನಾಗಿದ್ದು, ಆರೋಪಿಯಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ₹50 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೆ ಬಳಸಿದ ಕಬ್ಬಿಣದ ರಾಡನ್ನೂ ಜಪ್ತಿ ಮಾಡಲಾಗಿದೆ.

ಪರಿಚಯದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಮದುವೆಗಾಗಿ ಸಂಗ್ರಹಿಸಿದ್ದ ಚಿನ್ನದ ಆಭರಣಗಳ ಮೇಲಿನ ಆಸೆಯಿಂದಲೇ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶನಿವಾರ ರಾತ್ರಿ ವೈದ್ಯರ ಮನೆಯಲ್ಲಿ ತಂಗಿದ್ದ ವೇಳೆ ಡಾ. ರಮೇಶ ತಮ್ಮ ಮದುವೆಗಾಗಿ ತಂದಿದ್ದ ಚಿನ್ನದ ಒಡವೆಗಳನ್ನು ತೋರಿಸಿದ್ದೇ ಈ ದಾರುಣ ಘಟನೆಗೆ ಕಾರಣವಾಗಿದೆ.

ನಿದ್ರೆಯಲ್ಲಿದ್ದ ವೇಳೆ ವೈದ್ಯರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಹತ್ಯೆಗೈದ ಆರೋಪಿಯು, ಬಳಿಕ ಆಭರಣ ಹಾಗೂ ನಗದು ತೆಗೆದುಕೊಂಡು ಮನೆಯನ್ನು ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿರುವ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.