ಮುಂಬೈ: ಬುರ್ಖಾ ಮತ್ತು ಪರದೆ ಪದ್ಧತಿ ಕುರಿತು ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಅಲಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಬುರ್ಖಾ ಧರಿಸುವುದು ಅಥವಾ ಪರದೆಯೊಳಗೆ ಇರುವುದು ಆರಾಮದಾಯಕ ಎಂದು ಹೇಳುವವರ ವಿರುದ್ಧ ಅಸಮ್ಮತಿ ವ್ಯಕ್ತಪಡಿಸಿರುವ ಅವರು, ಇಂತಹ ಮನೋಭಾವವು ಸಮಾಜದ ಹಿಂಜರಿತದ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಪತ್ರಕರ್ತ ಸಮದೀಶ್ ಭಾಟಿಯಾ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಇಮ್ತಿಯಾಜ್ ಅಲಿ, ಇತ್ತೀಚೆಗೆ ಬಿಡುಗಡೆಯಾದ ತಮ್ಮ ಮೇ ವಾಪಸ್ ಆಊಂಗಾ ಚಿತ್ರದ ಕುರಿತು ಮಾತನಾಡುವ ವೇಳೆ ದೇಶ ವಿಭಜನೆ, ಪಿತೃಪ್ರಧಾನ ವ್ಯವಸ್ಥೆ ಹಾಗೂ ಸಾಮಾಜಿಕ ಸಂಪ್ರದಾಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
“ಯಾರಾದರೂ ‘ನಾನು ನನ್ನ ಬುರ್ಖಾದಲ್ಲಿ ಆರಾಮವಾಗಿದ್ದೇನೆ’ ಅಥವಾ ‘ನಾನು ನನ್ನ ಪರದೆಯಲ್ಲಿ ಆರಾಮವಾಗಿದ್ದೇನೆ’ ಎಂದು ಹೇಳುವುದನ್ನು ನಾನು ಇಷ್ಟಪಡುವುದಿಲ್ಲ. ಇದು ಅವನತಿಗೊಂಡ ಸಮಾಜದ ಲಕ್ಷಣವಾಗಿದೆ. ನೀವು ಹೀಗೆ ಭಾವಿಸುತ್ತಿದ್ದರೆ, ನಿಮ್ಮ ಮನಸ್ಸಿನಲ್ಲೇ ನೀವು ಎಷ್ಟರ ಮಟ್ಟಿಗೆ ಬಲಿಪಶುವಾಗಿದ್ದೀರಿ ಎಂಬುದು ನನಗೆ ಅರ್ಥವಾಗುವುದಿಲ್ಲ,” ಎಂದು ಅವರು ಹೇಳಿದರು.
ಈ ವೇಳೆ ನಿರೂಪಕರು, ವಿಭಿನ್ನ ಸಮುದಾಯಗಳಿಗೆ ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳಿದ್ದು, ವ್ಯಕ್ತಿಯೊಬ್ಬರು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವ ಹಕ್ಕನ್ನು ಗೌರವಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಮ್ತಿಯಾಜ್ ಅಲಿ, “ಇದು ಯಾರನ್ನಾದರೂ ತಡೆಯುವ ವಿಷಯವಲ್ಲ. ನಾನು ಯಾರ ಮನೆಗೆ ಹೋಗಿ ಅವರಿಗೆ ಉಪದೇಶ ಮಾಡುವವನಲ್ಲ. ಆದರೆ ಸಮಾಜದಲ್ಲಿ ಸಹಿಷ್ಣುತೆ ಮತ್ತು ಮಿತವಾದ ನಿಲುವು ಇರಬೇಕು. ಇತ್ತೀಚೆಗೆ ಎಲ್ಲರೂ ಅತಿರೇಕಿಗಳಾಗುತ್ತಿದ್ದಾರೆ. ಸಂವಾದ ನಡೆಸುವುದು ಕಷ್ಟವಾಗುತ್ತಿದೆ. ನಾನು ನಿಮ್ಮ ಶತ್ರುವಲ್ಲ,” ಎಂದು ಹೇಳಿದರು.
ಇಮ್ತಿಯಾಜ್ ಅಲಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದ್ದು, ಹಲವು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಮೇ ವಾಪಸ್ ಆಊಂಗಾ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್, ನಸೀರುದ್ದೀನ್ ಶಾ, ವೇದಾಂಗ್ ರೈನಾ ಹಾಗೂ ಶರ್ವರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವು ಎಂಟು ದಶಕಗಳ ಹಿಂದೆ ಕಳೆದುಹೋದ ಪ್ರೀತಿಯ ನೆನಪುಗಳನ್ನು ಆಧರಿಸಿದ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.