ಬೆಳಗಾವಿ, ಜುಲೈ 17: ಖಾನಾಪುರದಲ್ಲಿ ಪತ್ತೆಯಾಗಿದ್ದ ದೇಶೀ ಪಿಸ್ತೂಲ್ ತಯಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟಿನ ಧಾರವಾಡ ಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಪಡೆದವರು ಖಾನಾಪುರ ತಾಲೂಕಿನ ಮೋದೆಕೊಪ್ಪ ಗ್ರಾಮದ ಲಕ್ಷ್ಮಣ ಈಶ್ವರ ಗುರವ್ (50) ಹಾಗೂ ದೇಸೂರು ಗ್ರಾಮದ ಮಹೇಶ್ ಮಾರುತಿ ಲಕ್ಕೆಬೈಲ್ಕರ್ (55). ಇವರ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು.
ಖಾನಾಪುರ ತಾಲೂಕಿನ ಕಟಗಾಳಿ ಗ್ರಾಮದ ನಿವಾಸಿ ಮಾರುತಿ ಶ್ರೀಕಾಂತ ಸುತಾರ ತನ್ನ ಮನೆಯಲ್ಲಿ ಅಕ್ರಮವಾಗಿ ದೇಶೀ ಪಿಸ್ತೂಲ್ ತಯಾರಿಕೆ ಘಟಕ ನಡೆಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಘಟಕವನ್ನು ಪತ್ತೆಹಚ್ಚಿದ್ದರು. ತನಿಖೆಯ ಆಧಾರದ ಮೇಲೆ 2026ರ ಮೇ 11ರಂದು ಖಾನಾಪುರ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅಕ್ರಮ ಶಸ್ತ್ರಾಸ್ತ್ರಗಳ ತಯಾರಿಕೆ, ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿದ್ದ ಆರೋಪದಡಿ 13 ಮಂದಿಯನ್ನು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಎಂಟು ದೇಶೀ ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆರೋಪಿಗಳ ಪರ ವಕೀಲ ಓಂಕಾರ ಎಲ್. ದೇಸಾಯಿ ಅವರು ಧಾರವಾಡ ಹೈಕೋರ್ಟಿನ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು, ತಲಾ ₹2 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರು ಜಾಮೀನುದಾರರನ್ನು ಒದಗಿಸುವ ಷರತ್ತಿನೊಂದಿಗೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕರಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಅಥವಾ ಪ್ರಭಾವ ಬೀರಬಾರದು, ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ಪ್ರಸ್ತುತ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತನಿಖಾಧಿಕಾರಿಗೆ ನೀಡಬೇಕು, ವಿಳಾಸ ಬದಲಾದಲ್ಲಿ 48 ಗಂಟೆಗಳೊಳಗೆ ಮಾಹಿತಿ ನೀಡಬೇಕು ಹಾಗೂ ಪೂರ್ವಾನುಮತಿ ಇಲ್ಲದೆ ಸಂಬಂಧಿಸಿದ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ತೊರೆಯಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಹೈಕೋರ್ಟಿನಲ್ಲಿ ಆರೋಪಿಗಳ ಪರ ವಕೀಲ ಓಂಕಾರ ಎಲ್. ದೇಸಾಯಿ ವಾದ ಮಂಡಿಸಿದರು.