ವಿಜಯಪುರ, ಆಗಸ್ಟ್ 31: ವಸ್ತುಗಳನ್ನು ಹಣ ಪಾವತಿಸದೆ ತೆಗೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಪೈಪ್ನಿಂದ ಹಿಗ್ಗಾಮುಗ್ಗಾ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಸೂಪರ್ ಬಜಾರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಲಘಾಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮ ಸಹಾಯಕ ರಹಮಾನ್ ವಾಲಿಕಾರ ಅವರ 11 ವರ್ಷದ ಪುತ್ರ ಹಾಗೂ ಆತನ 14 ವರ್ಷದ ಸ್ನೇಹಿತ ಹಲ್ಲೆಗೊಳಗಾದ ಬಾಲಕರು. ಆಗಸ್ಟ್ 28ರಂದು ಶುಕ್ರವಾರ ಇಬ್ಬರೂ ಸೂಪರ್ ಬಜಾರ್ಗೆ ತೆರಳಿದ್ದರು.
ಬಾಲಕರು ಮೊದಲು ಬೂಸ್ಟ್ ಪ್ಯಾಕೆಟ್ವೊಂದನ್ನು ತೆಗೆದುಕೊಂಡು ಅದಕ್ಕೆ ಹಣ ಪಾವತಿಸದೆ ಜೇಬಿನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಬಳಿಕ ತಿಂಡಿ ಹಾಗೂ ಇತರ ತಿನಿಸುಗಳನ್ನು ಖರೀದಿಸಲು ಸೂಪರ್ ಬಜಾರ್ನಲ್ಲಿ ಹುಡುಕಾಡುತ್ತಿದ್ದಾಗ ಅಂಗಡಿ ಮಾಲೀಕ ಅಶೋಕ ಪತ್ತಾರ ಅಲ್ಲಿಗೆ ಬಂದಿದ್ದಾನೆ.
ಬಾಲಕರು ಮೊದಲಿಗೆ ತೆಗೆದುಕೊಂಡಿದ್ದ ಬೂಸ್ಟ್ ಪ್ಯಾಕೆಟ್ಗೆ ಹಣ ಪಾವತಿಸುವಂತೆ ಸೂಚಿಸಿದ ಮಾಲೀಕ, ಬಳಿಕವೇ ಬೇರೆ ವಸ್ತುಗಳನ್ನು ಖರೀದಿಸುವಂತೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಕೋಪಗೊಂಡ ಆತ ಬಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಪೈಪ್ನಿಂದ ಇಬ್ಬರು ಬಾಲಕರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಬಾಲಕರಿಗೆ ತೀವ್ರ ಗಾಯಗಳಾಗಿವೆ.
ಘಟನೆಯ ಬಳಿಕ ಗಾಯಗೊಂಡ ಬಾಲಕರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಯಾರೋ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೊ ವೈರಲ್ ಆದ ಬೆನ್ನಲ್ಲೇ ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಮಕ್ಕಳಿಂದ ತಪ್ಪಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಅವರನ್ನು ಪೈಪ್ನಿಂದ ಥಳಿಸಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಪರ್ ಬಜಾರ್ ಮಾಲೀಕ ಅಶೋಕ ಪತ್ತಾರನನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.