ಹುಬ್ಬಳ್ಳಿ, ಜೂನ್ 20: ಯುವತಿಯೊಂದಿಗೆ ಊಟಕ್ಕೆ ತೆರಳಿದ್ದ ಕ್ರಿಶ್ಚಿಯನ್ ಯುವಕನನ್ನು ಹೊಟೇಲ್ನಿಂದಲೇ ಕರೆದೊಯ್ದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ನೈತಿಕ ಪೊಲೀಸ್ಗಿರಿಯ ಮತ್ತೊಂದು ಪ್ರಕರಣ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಸಮೀಪ ಬೆಳಕಿಗೆ ಬಂದಿದೆ. ಯುವಕನನ್ನು ಅಪಹರಿಸಿ ರೂಮ್ನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿರುವುದಲ್ಲದೆ, ಕುಟುಂಬಸ್ಥರಿಗೆ ಹಣಕ್ಕಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ.
ಹುಬ್ಬಳ್ಳಿಯ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ ಶರವೀನ ಜೋಗುಳ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಮೂಲತಃ ಧಾರವಾಡ ಜಿಲ್ಲೆಯ ಅನ್ಯಕೋಮಿನ ಯುವತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಶರವೀನ, ಶುಕ್ರವಾರ ಯುವತಿಯೊಂದಿಗೆ ಅಂಚಟಗೇರಿ ಬಳಿಯ ರಾಸ್ತಾ-63 ಹೊಟೇಲ್ಗೆ ಊಟಕ್ಕಾಗಿ ತೆರಳಿದ್ದನು. ಇಬ್ಬರೂ ಹೊಟೇಲ್ನಲ್ಲಿದ್ದ ವೇಳೆ ಮಹಿಳೆಯೊಬ್ಬರು ಸೇರಿದಂತೆ 8ರಿಂದ 10 ಜನರ ಗುಂಪು ಅಲ್ಲಿಗೆ ಆಗಮಿಸಿದೆ. ಬಳಿಕ ಯುವಕನನ್ನು ಪ್ರಶ್ನಿಸಿದ ಗುಂಪು, ಅಲ್ಲಿಂದ ಬಲವಂತವಾಗಿ ಕರೆದೊಯ್ದಿದೆ ಎನ್ನಲಾಗಿದೆ. ಹೊಟೇಲ್ನಿಂದ ಹೊರತೆಗೆದ ಬಳಿಕ ಬೈಕ್ನಲ್ಲಿ ಹುಬ್ಬಳ್ಳಿಗೆ ಕರೆತಂದು, ಸಿದ್ಧಾರೂಢ ಮಠದ ಸಮೀಪದ ಬಾರ್ವೊಂದರ ಶೆಡ್ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಯುವಕನಿಗೆ ಜಾತಿ ಹಾಗೂ ಧರ್ಮದ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಯುವತಿಯೊಂದಿಗೆ ಸಂಪರ್ಕ ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಜೀವ ಬೆದರಿಕೆ ಹಾಕಿರುವುದರ ಜೊತೆಗೆ, ಯುವಕನ ತಾಯಿಗೆ ಕರೆ ಮಾಡಿ ₹5 ಲಕ್ಷ ಹಣ ನೀಡುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಶರವೀನನನ್ನು ತಕ್ಷಣ ಕೆಎಂಸಿಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ಯ ಗುಂಜನ್, ಡಿವೈಎಸ್ಪಿ ವಿನೋದ ಮುಕ್ತೇದಾರ ಹಾಗೂ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯುವಕನಿಂದ ಮಾಹಿತಿ ಸಂಗ್ರಹಿಸಿದ್ದಾರೆ.