ರಷ್ಯಾ ನೆಲದಲ್ಲಿ ವಿಶ್ವಶಾಂತಿ ಸಂದೇಶ ನೀಡಿದ ಶಿಫಾ
ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿದ ಶಿಫಾ ಜಮಾದಾರ ಅವರು ವಿಶ್ವಶಾಂತಿಯ ಅಗತ್ಯತೆ, ಶಾಂತಿ ಸಂದೇಶ ಸಾರುವಲ್ಲಿ ಭಾರತದ ಪಾತ್ರ ಕುರಿತು ಮನಮುಟ್ಟುವಂತೆ ಮಾತನಾಡುವ ಮೂಲಕ ರಷ್ಯಾದಲ್ಲಿ ಶಾಂತಿ ಮಂತ್ರದ ಸಂದೇಶ ಸಾರಿದ್ದಾರೆ.
ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟೀನ್, ಮ್ಯಾನ್ಮಾರ್ ರಾಷ್ಟ್ರಪತಿ, ಅರ್ಮೇನಿಯಾ ಪ್ರಧಾನಿ, ಇತೋಫಿಯಾ ಪ್ರಧಾನಮಂತ್ರಿ, ಬೇಲಾರೂಸ್ ಪ್ರಧಾನಿ, ಸೇರಿದಂತೆ
ಅನೇಕ ರಾಷ್ಟಗಳ ಪ್ರಧಾನಮಂತ್ರಿಗಳು, ರಾಷ್ಟ್ರಾಧ್ಯಕ್ಷರು,
ಉಜ್ಬೇಕಿಸ್ತಾನ್, ಅರಬ್ ಗಣರಾಜ್ಯ, ಇರಾನ್, ಈಜಿಪ್ತ್ ಹಾಗೂ ನೈಜಿರೀಯಾ ಸೇರಿದಂತೆ ವಿವಿಧ ದೇಶಗಳ ವಿದೇಶಾಂಗ ಸಚಿವರು, ರಾಯಭಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಶಿಫಾ ಸಮರ್ಥವಾಗಿ ವಿಶ್ವ ಶಾಂತಿ ಕುರಿತಾದ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿ ವಿಶ್ವ ಶಾಂತಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟರು.
ಭಾರತೀಯ ಸಂಸ್ಕೃತಿ, ಸಹೋದರತೆಯ ಪ್ರತಿಬಿಂಬವಾಗಿರುವ `ವಸುಧೈವ
ಕುಟುಂಬಕಂ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ನೆಲೆಗಟ್ಟಿನ ಆಧರಿಸಿ ಸಮರ್ಥವಾಗಿ ತಮ್ಮ ವಿಚಾರಗಳನ್ನು ಮಂಡಿಸಿ ಇಡೀ ವಿಶ್ವದ ಯುವ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವ ಅಣು ದಿನಾಚರಣೆ ಅಂಗವಾಗಿ ರಷ್ಯಾ ಸರ್ಕಾರ ರಾಜಧಾನಿ ಮಾಸ್ಕೋದಲ್ಲಿ
ಆಯೋಜಿಸಿದ್ದ ವಿಶ್ವ ಯುವ ಶೃಂಗ ಸಭೆಯಲ್ಲಿ ಇಂಗ್ಲೆಂಡ್, ಅಮೇರಿಕೆ, ಜರ್ಮನಿ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದ ಸರಿಸುಮಾರು 160 ಕ್ಕೂ ಅಧಿಕ ದೇಶದ ಯುವ ಪ್ರತಿನಿಧಿಗಳು ಈ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಮಾವೇಶದಲ್ಲಿ ವಿಶ್ವಶಾಂತಿ ಹಾಗೂ ವಿಶ್ವ ಶಾಂತಿ ಕಾಪಾಡುವಲ್ಲಿ
ಯುವಜನತೆಯ ಪಾತ್ರ ಹಾಗೂ ವಿಶ್ವ ಶಾಂತಿ ಸ್ಥಾಪಿಸುವಲ್ಲಿ ಭಾರತದ ದಿವ್ಯ
ಹೆಜ್ಜೆಗಳ ಕುರಿತು ಸುದೀರ್ಘವಾಗಿ ತಮ್ಮ ವಿಚಾರಗಳನ್ನು
ಪ್ರಸ್ತುತಪಡಿಸಿದರು.
ಇಂದು ದೇಶ-ದೇಶಗಳ ನಡುವೆ ದ್ವೇಷ ಭಾವನೆ ಬೆಳೆದು ಯುದ್ಧೋನ್ಮಾದ ಕಂಡು ಬರುತ್ತಿರುವುದು ವಿಶ್ವಶಾಂತಿಗೆ ಅಪಾಯದ ಸಂಗತಿ, ಈ ಎಲ್ಲ ಸಮಸ್ಯೆಗಳಿಗೆ ಶಾಂತಿ, ಸಹೋದರತೆಯೇ ಪರಿಹಾರವಾಗಿದೆ, ನಮ್ಮ ಭವ್ಯ ಭಾರತದ ಸಂಸ್ಕೃತಿ ವಿಶ್ವಶಾಂತಿಯ ಪ್ರತೀಕವೂ ಹೌದು, ಭಾರತೀಯ ಸಂಸ್ಕೃತಿ
ಪ್ರತಿಪಾದಿಸುವ ವಸುದೈವ ಕುಟುಂಬ ಎನ್ನುವ ಉಕ್ತಿಯಲ್ಲಿಯೇ ಇಡೀ ಜಗತ್ತೇ ಒಂದು ಕುಟುಂಬ ಎಂಬ ಸಂದೇಶವನ್ನು ಭಾರತ ಸಾರಿದೆ. ಈ ತತ್ವ ಅನುಸರಿಸಿ ನಡೆದರೆ ಯಾವ ದ್ವೇಷವೂ ಇರುವುದಿಲ್ಲ, ಶಾಂತಿ ನಮ್ಮ ಮಂತ್ರವಾಗಬೇಕು, ನಮ್ಮ ಜೀವನ ಸೂತ್ರವಾಗಬೇಕು, ವಿಶ್ವ ಶಾಂತಿ ಸ್ಥಾಪಿಸುವಲ್ಲಿ ಯುವಜನತೆ ಮಹತ್ವದ
ಪಾತ್ರ ನಿಭಾಯಿಸಬೇಕು, ದ್ವೇಷಭಾವ ಅಳಿಸುವ ಕಾರ್ಯದಲ್ಲಿ ಸಹಭಾಗಿತ್ವ
ನೀಡಬೇಕು ಎಂದು ಶಿಫಾ ಕರೆ ನೀಡಿದ್ದಾರೆ.
ಇದೇ ಪ್ರಥಮ ಬಾರಿಗೆ ಜಾಗತಿಕ ಮಟ್ಟದ ಶೃಂಗ ಸಭೆಯಲ್ಲಿ ವಿಜಯಪುರ ಯುವ ಪ್ರತಿಭೆಯೊಬ್ಬರು ಭಾರತ ದೇಶವನ್ನು ಪ್ರತಿನಿಧಿಸಿದ್ದು ಇದೇ ಪ್ರಥಮ. ವಿಶ್ವ ಶಾಂತಿ ಇಂದಿನ ಅಗತ್ಯತೆ, ಶಾಂತಿ ಇಂದಿನ ಜೀವನ ಅಂಗವಾಗಬೇಕು, ನಮ್ಮ ಭಾರತ ದೇಶದ ಸಂಸ್ಕೃತಿಯ ಬೆಳಕಿನಲ್ಲಿ ವಿಶ್ವಶಾಂತಿಯ ಮಹತ್ವವನ್ನು ಸಾರಿದ್ದೇನೆ, ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಿಫಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.