LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

‘ಇಸ್ಲಾಮಾಬಾದ ಒಪ್ಪಂದ’ ಭಾರತದ ರಾಜತಾಂತ್ರಿಕ ಹಿನ್ನಡೆ : ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ, ಜೂನ್ 18: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ‘ಇಸ್ಲಾಮಾಬಾದ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ ಎಂದು ಹೆಸರಿಡಲಾಗಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದೆ. ಇದು ಪಾಕಿಸ್ತಾನದ ಹೆಚ್ಚುತ್ತಿರುವ ಜಾಗತಿಕ ಪ್ರಭಾವ ಮತ್ತು ಭಾರತದ ರಾಜತಾಂತ್ರಿಕ ಹಿನ್ನಡೆಯ ಸಂಕೇತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ ರಮೇಶ, ಅಮೆರಿಕಾ–ಇರಾನ್ ನಡುವಿನ 14 ಅಂಶಗಳ ಶಾಂತಿ ಒಪ್ಪಂದಕ್ಕೆ ‘ಇಸ್ಲಾಮಾಬಾದ ಎಂಒಯು’ ಎಂದು ಹೆಸರಿಡಲಾಗಿರುವುದು ಪಾಕಿಸ್ತಾನದ ಹೊಸ ಪ್ರಾದೇಶಿಕ ಸ್ಥಾನಮಾನ ಮತ್ತು ಜಾಗತಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

2008ರ ಮುಂಬೈ ಉಗ್ರ ದಾಳಿಯ ಬಳಿಕ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಭಾರತವು ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ಅಮೆರಿಕಾ ಮತ್ತು ಇರಾನ್ ನಡುವಿನ ಮಹತ್ವದ ಒಪ್ಪಂದಕ್ಕೆ ‘ಇಸ್ಲಾಮಾಬಾದ ಎಂಒಯು’ ಎಂಬ ಹೆಸರು ಬಂದಿರುವುದು ಪಾಕಿಸ್ತಾನದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದ ಸಂಪೂರ್ಣವಾಗಿ ಜಾರಿಯಾದರೆ ಅದು ಮಧ್ಯಪ್ರಾಚ್ಯದಲ್ಲಿ ಮಹತ್ವದ ರಾಜತಾಂತ್ರಿಕ ಸಾಧನೆಯಾಗಬಹುದು. ಆದರೆ ಅದು ‘ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ ಬದಲಿಗೆ ‘ಮೆಮೊರಾಂಡಂ ಆಫ್ ಮಿಸ್‌ಅಂಡರ್‌ಸ್ಟ್ಯಾಂಡಿಂಗ್’ ಆಗುವ ಸಾಧ್ಯತೆಯೂ ಇದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಮುಂದಿನ 60 ದಿನಗಳು ಈ ಒಪ್ಪಂದದ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಅವಧಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಈ ಒಪ್ಪಂದದ ಮೂಲಕ ಅನಿರೀಕ್ಷಿತ ರಾಜತಾಂತ್ರಿಕ ಲಾಭ ಗಳಿಸಿದ್ದು, ತನ್ನ ಪ್ರತಿರೋಧ ಸಾಮರ್ಥ್ಯ ಮತ್ತು ಸ್ಥೈರ್ಯವನ್ನು ಜಗತ್ತಿಗೆ ಪ್ರದರ್ಶಿಸಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಜೊತೆಗೆ ಇರಾನ್ ಪ್ರತಿದಾಳಿಗಳ ಪರಿಣಾಮವನ್ನು ಎದುರಿಸಿದ್ದ ಗಲ್ಫ್ ಸಹಕಾರ ಮಂಡಳಿ ರಾಷ್ಟ್ರಗಳು ಈ ಒಪ್ಪಂದವನ್ನು ಎಚ್ಚರಿಕೆಯಿಂದ ಸ್ವಾಗತಿಸಿದ್ದು, ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಈ ಒಪ್ಪಂದವು ನೆತನ್ಯಾಹು ಅವರಿಗೆ ರಾಜತಾಂತ್ರಿಕ ಸೋಲಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ನೆತನ್ಯಾಹು ಹೆಚ್ಚು ಹೆಚ್ಚು ಏಕಾಂಗಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಲೆಬನಾನ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್ ವಿಚಾರಗಳಲ್ಲಿ ಇಸ್ರೇಲ್ ಅನುಸರಿಸುತ್ತಿರುವ ನೀತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇನ್ನೂ ಬೆಂಬಲ ನೀಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

ಅಮೆರಿಕಾ ಮತ್ತು ಇಸ್ರೇಲ್ ಆರಂಭಿಸಿದ್ದ ಯುದ್ಧ ತನ್ನ ಮೂಲ ಗುರಿಗಳನ್ನು ಸಾಧಿಸಲು ವಿಫಲವಾಗಿದೆ. ಈ ಬೆಳವಣಿಗೆ ಸೇನಾ ಶಕ್ತಿಯ ಮಿತಿಗಳನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿಟ್ಟಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಮೋದಿ ಸರ್ಕಾರ ತೋರಿಸುತ್ತಿರುವ ಒಲವಿನ ಧೋರಣೆಯನ್ನೂ ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ಗೆ ಸಹಿ ಹಾಕಿದ್ದು, ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ಸಾಧ್ಯವಾಗಿದೆ ಎಂದು ಹೇಳಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST