ದಾಂಡೇಲಿ, ಮೇ 3 : ಕಾಳಿ ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬನ ಮೇಲೆ ಮೊಸಳೆಯೊಂದು ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಮೊಸಳೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ (42) ಎಂದು ಗುರುತಿಸಲಾಗಿದೆ. ಶೌಚಕ್ಕಾಗಿ ಕಾಳಿ ನದಿಗೆ ತೆರಳಿದ್ದ ವೇಳೆ ಮೊಸಳೆಯೊಂದು ಏಕಾಏಕಿ ದಾಳಿ ನಡೆಸಿ, ನದಿಯೊಳಗೆ ಹೊತ್ತೊಯ್ಯಲು ಯತ್ನಿಸಿದೆ.
ಮೊಸಳೆಯ ದಾಳಿಯಿಂದ ಗಾಯಗೊಂಡ ಆನಂದ ಕಿರುಚಾಡಿದ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಆಗಮಿಸಿ ಮೊಸಳೆಯನ್ನು ಓಡಿಸಿದ್ದಾರೆ. ದಾಳಿಯಿಂದ ಅವರ ಕಾಲು ಹಾಗೂ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಲಾಗಿದೆ.
ಘಟನೆ ಸಂಬಂಧ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.