ಹೊಸದಿಲ್ಲಿ, ಜೂ. 9 : ಚುನಾವಣೆಯಲ್ಲಿ ಒಂದು ಪಕ್ಷದ ಚಿಹ್ನೆಯಡಿ ಗೆದ್ದು ಬಳಿಕ ಫಲಿತಾಂಶಗಳು ಅಥವಾ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿದ್ದಂತೆ ಪಕ್ಷ ತೊರೆಯುವ ನಾಯಕರ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅದು ನಾಚಿಕೆಗೇಡಿನ ಸಂಗತಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಅವರು ತೃಣಮೂಲ ಕಾಂಗ್ರೆಸ್ ಮತ್ತು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದ ಮೇಲಿನ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಬಿಜೆಪಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂಬ ನಂಬಿಕೆಯೇ ತಮ್ಮನ್ನು ಸಾರ್ವಜನಿಕ ಜೀವನದತ್ತ ಕೊಂಡೊಯ್ದಿತು ಎಂದು ಅವರು ಹೇಳಿದ್ದಾರೆ.
2024ರ ಅವಧಿಯಲ್ಲಿ ತಮ್ಮ ವೈಯಕ್ತಿಕ ಅನುಭವಗಳೇ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ಗಟ್ಟಿಗೊಳಿಸಿದವು ಎಂದು ಹೇಳಿರುವ ಸಾಗರಿಕಾ ಘೋಷ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಒಡ್ಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಭಜನೆ ಮತ್ತು ದ್ವೇಷದ ರಾಜಕಾರಣದ ವಿರುದ್ಧದ ಹೋರಾಟವನ್ನು ಬೆಂಬಲಿಸುವುದು ತಮ್ಮ ನಿಲುವಾಗಿದೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಧೈರ್ಯ, ರಾಜಕೀಯ ದೃಢತೆ ಹಾಗೂ ಮೌಲ್ಯಾಧಾರಿತ ನಾಯಕತ್ವವೇ ತಮಗೆ ಸ್ಫೂರ್ತಿ ಎಂದು ಹೇಳಿರುವ ಅವರು, ಅವರ ನಾಯಕತ್ವದ ಮೇಲೆ ಸದಾ ಅಚಲ ವಿಶ್ವಾಸ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಒಂದು ಪಕ್ಷದ ಚಿಹ್ನೆಯಡಿ ಗೆದ್ದು ಬಳಿಕ ಬೇರೆ ಪಕ್ಷದತ್ತ ಮುಖ ಮಾಡುವ ನಾಯಕರನ್ನು ಪರೋಕ್ಷವಾಗಿ ಟೀಕಿಸಿರುವ ಅವರು, ನಂಬಿಕೆಗಳು ಚುನಾವಣಾ ಫಲಿತಾಂಶದೊಂದಿಗೆ ಬದಲಾಗುವುದಾದರೆ ಅವುಗಳನ್ನು ನಿಜವಾದ ಸಿದ್ಧಾಂತಗಳೆಂದು ಹೇಗೆ ಕರೆಯಬಹುದು ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿದ ಅವರು, ಅಧಿಕಾರದ ಆಕರ್ಷಣೆ ಅಥವಾ ರಾಜಕೀಯ ಒತ್ತಡಗಳ ಎದುರು ನೈತಿಕತೆ ಮತ್ತು ನಿಷ್ಠೆ ಮರೆಯಾಗಬಾರದು ಎಂದು ಹೇಳಿದ್ದಾರೆ. ಗೆಲುವಿನವರೆಗೆ ಮಾತ್ರ ನಿಷ್ಠೆ ಪ್ರದರ್ಶಿಸಿ ಬಳಿಕ ಅದನ್ನು ತ್ಯಜಿಸುವುದು ರಾಜಕೀಯ ಮೌಲ್ಯಗಳಿಗೆ ಧಕ್ಕೆ ತರುವ ನಡೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ನ ಕೆಲವು ಸಂಸದರು ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದತ್ತ ಒಲವು ತೋರಬಹುದು ಎಂಬ ರಾಜಕೀಯ ವಲಯದ ಚರ್ಚೆಗಳ ನಡುವೆ ಸಾಗರಿಕಾ ಘೋಷ್ ಅವರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.