LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವೈರಲ್ ಆಡಿಯೋದಿಂದ ಬಿಜೆಪಿಯಲ್ಲಿ ಮತ್ತೆ ಸಂಚಲನ

ಬೆಂಗಳೂರು, ಜೂನ್ ೨೯: ಬಿಜೆಪಿ ರಾಜ್ಯ ಘಟಕದಲ್ಲಿ ಗುಂಪುಗಾರಿಕೆ ಇನ್ನೂ ಶಮನಗೊಂಡಿಲ್ಲ ಎಂಬ ಚರ್ಚೆಗೆ ಹೊಸ ವೈರಲ್ ಆಡಿಯೋ ಮತ್ತಷ್ಟು ಇಂಧನ ಸುರಿದಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಬಹಿರಂಗಗೊಂಡಿತ್ತು. ಇದೀಗ ವೈರಲ್ ಆಗಿರುವ ಆಡಿಯೋದಲ್ಲೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸುವ ಕುರಿತು ಮಾತುಕತೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ, ಡಿ.ವಿ.ಸದಾನಂದಗೌಡ ಅವರು ಬಿಜೆಪಿಯ ರಾಷ್ಟ್ರೀಯ ಮಟ್ಟದ ಮುಖಂಡರೊಬ್ಬರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಅವರನ್ನು ಮುಂದಿನ ಕೆಲವು ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಧ್ವನಿ ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ.

ಆಡಿಯೋದಲ್ಲಿರುವ ಮಾತುಕತೆಯ ಪ್ರಕಾರ, ವಿಜಯೇಂದ್ರ ಅವರ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಅಕ್ಟೋಬರ್‌ನಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದರೆ ಆರಂಭದಲ್ಲಿ ಕೆಲ ವಿರೋಧಗಳು ವ್ಯಕ್ತವಾಗಬಹುದು. ಆದರೆ ಸೂಕ್ತ ನಾಯಕನಿಗೆ ಅವಕಾಶ ನೀಡಿದರೆ ಪರಿಸ್ಥಿತಿ ಸಹಜವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ.

ಆದರೆ, ಈ ವೈರಲ್ ಆಡಿಯೋ ಅಧಿಕೃತವೇ ಅಥವಾ ತಿರುಚಲ್ಪಟ್ಟದ್ದೇ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ. ಆಡಿಯೋದಲ್ಲಿರುವ ಧ್ವನಿ ಡಿ.ವಿ.ಸದಾನಂದಗೌಡ ಅವರದ್ದೇ ಎಂಬುದೂ ಖಚಿತವಾಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಡಿ.ವಿ.ಸದಾನಂದಗೌಡ, ತಮ್ಮ ಹೆಸರನ್ನು ಉಲ್ಲೇಖಿಸಿ ಹಲವು ದಿನಗಳಿಂದ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು. ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ಬಳಿಕ ತಮ್ಮ ಹೇಳಿಕೆಗಳನ್ನು ಆಧರಿಸಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ವೈರಲ್ ಆಗಿರುವ ಆಡಿಯೋ ಕುರಿತು ಮಾಧ್ಯಮಗಳೇ ಸಮಗ್ರ ತನಿಖೆ ನಡೆಸಬೇಕು. ಅದರ ಮೂಲ ಏನು, ಯಾರು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಪಕ್ಷದ ಆಂತರಿಕ ಚರ್ಚೆಗಳು ಈಗ ಸಾರ್ವಜನಿಕವಾಗಿ ಹರಿದಾಡುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

ಈ ಆಡಿಯೋ ಕುರಿತು ತಾವು ಯಾವುದೇ ತನಿಖೆ ನಡೆಸುವುದಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದೂ ಇಲ್ಲ. ಪಕ್ಷದ ರಾಷ್ಟ್ರೀಯ ನಾಯಕತ್ವ ಈ ಕುರಿತು ಪ್ರಶ್ನಿಸಿದರೆ ಅವರಿಗೆ ಮಾತ್ರ ಅಗತ್ಯ ಸ್ಪಷ್ಟನೆ ನೀಡುತ್ತೇನೆ ಎಂದು ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಆಡಿಯೋ ನೈಜವೇ ಅಥವಾ ಕೃತಕವಾಗಿ ಸೃಷ್ಟಿಸಲ್ಪಟ್ಟಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಬೆಳವಣಿಗೆ ಬಿಜೆಪಿಯ ಆಂತರಿಕ ರಾಜಕೀಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ. ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ಹಿನ್ನೆಲೆಯಲ್ಲಿ ಈಗಾಗಲೇ ಅಸಮಾಧಾನಗೊಂಡಿರುವ ಪಕ್ಷದ ಹೈಕಮಾಂಡ್ ಈ ಬೆಳವಣಿಗೆಯನ್ನು ಯಾವ ರೀತಿಯಲ್ಲಿ ಪರಿಗಣಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮ ಮಂದಿರ ದೇಣಿಗೆ ಪ್ರಕರಣ: ತುರ್ತು ವಿಚಾರಣೆಗೆ ಸುಪ್ರೀಮ ಕೋರ್ಟ ನಿರಾಕರಣೆರಕ್ತದಾನಿಗಳಿಗೆ ₹1 ಲಕ್ಷವರೆಗೆ ಉಚಿತ ಅಪಘಾತ ವಿಮೆಪಾಲಿಕೆ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತ ಕಾರ್ತಿಕ ಮನವಿಚಾಲನೆಯಲ್ಲೇ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರುವೈರಲ್ ಆಡಿಯೋದಿಂದ ಬಿಜೆಪಿಯಲ್ಲಿ ಮತ್ತೆ ಸಂಚಲನರಾಮ ಮಂದಿರ ದೇಣಿಗೆ ಹಗರಣ: ಆರೋಪಿಗಳ ಪರ ವಕಾಲತ್ತು ವಹಿಸದಿರಲು ಅಯೋಧ್ಯೆ ವಕೀಲರ ಸಂಘದ ನಿರ್ಧಾರವಿದ್ಯುತ್ ನಿಗಮಗಳ ಖಾಸಗೀಕರಣದ ಪ್ರಶ್ನೆಯೇ ಇಲ್ಲ: ಕೆ.ಜೆ.ಜಾರ್ಜವಿದ್ಯುತ್ ಖಾಸಗೀಕರಣದ ಬಗ್ಗೆ ಸಚಿವ ಸಂಪುಟದಲ್ಲೇ ಅಂತಿಮ ನಿರ್ಧಾರ: ಡಿ.ಕೆ.ಶಿವಕುಮಾರಮನುಷ್ಯರನ್ನು ಕೊಂದವರು ಪ್ರಧಾನಿ, ಮುಖ್ಯಮಂತ್ರಿಗಳಾಗುತ್ತಾರೆ; ಹರಿಪ್ರಸಾದ ವಿವಾದಿತ ಹೇಳಿಕೆಸ್ಪೆಲ್ಲಿಂಗ್ ತಪ್ಪಾದ ಮಾತ್ರಕ್ಕೆ ಜನರ ಹಕ್ಕು ಕಿತ್ತುಕೊಳ್ಳುವುದು ತಪ್ಪು