ಬೆಳಗಾವಿ, ಜುಲೈ 21: ರಾಜ್ಯದ 63 ಗಡಿ ತಾಲೂಕುಗಳು ಹಾಗೂ ಹೊರರಾಜ್ಯಗಳ ಆರು ಕನ್ನಡ ಭಾಷಿಕ ಪ್ರದೇಶಗಳಲ್ಲಿರುವ ಸುಮಾರು ಶೇ.90ರಷ್ಟು ಕನ್ನಡ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಆದ್ಯತೆ ಆಧಾರಿತ ಅನುದಾನ ನೀಡಬೇಕು ಎಂದು ಸಮೀಕ್ಷಾ ಸಮಿತಿ ಶಿಫಾರಸು ಮಾಡಿದೆ.
ರಾಜ್ಯದ ಗಡಿ ಪ್ರದೇಶಗಳ ಸಮಗ್ರ ಅಧ್ಯಯನಕ್ಕಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಲಯ, ಹಂಪಿ ಸೇರಿದಂತೆ ಎಂಟು ವಿಶ್ವವಿದ್ಯಾಲಯಗಳಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಯನದ ಹೊಣೆ ನೀಡಿತ್ತು. ಕ್ಷೇತ್ರ ಸಮೀಕ್ಷೆಯ ಆಧಾರದ ಮೇಲೆ ಸಲ್ಲಿಸಲಾದ ವರದಿಗಳನ್ನು ಕ್ರೋಡೀಕರಿಸಿ, ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಸಮಗ್ರ ವರದಿ ಸಿದ್ಧಪಡಿಸಿದ್ದು, ಅದನ್ನು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರಿಗೆ ಸಲ್ಲಿಸಲಾಗಿದೆ.
ಗಡಿ ಭಾಗಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿಯಲ್ಲಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಲಾಗಿದೆ.
ವರದಿ ಸಲ್ಲಿಕೆ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಡಾ. ಮಣಿಕಂಠ, ಡಾ. ಎಚ್.ಸಿ. ನರಸಿಂಹರಾಜು ಹಾಗೂ ಜಂಟಿ ನಿರ್ದೇಶಕ ಎಂ.ವಿ. ವೆಂಕಟೇಶ ಉಪಸ್ಥಿತರಿದ್ದರು.
ಗಡಿ ಭಾಗದ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸಬೇಕು. ಜತ್ತ, ಅಕ್ಕಲಕೋಟೆ, ಕಾಸರಗೋಡು, ಅದೋನಿ, ಮಂತ್ರಾಲಯ, ಹೊಸೂರು ಸೇರಿದಂತೆ ಹೊರರಾಜ್ಯದ ಕನ್ನಡ ಪ್ರದೇಶಗಳಲ್ಲಿ ಪ್ರತಿ ತಿಂಗಳು ವಿಶೇಷ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.
ಹೊರರಾಜ್ಯದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಸಂವಿಧಾನದ ಅನುಚ್ಛೇದ 29, 30, 347, 350 ಹಾಗೂ 350ಎ ಅನ್ವಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ರಾಜ್ಯದಲ್ಲಿ 371ಜೆ ಅಡಿ ದೊರೆಯುವ ವಿಶೇಷ ಸೌಲಭ್ಯಗಳ ಮಾದರಿಯಲ್ಲಿ ಹೊರರಾಜ್ಯದ ಕನ್ನಡಿಗರಿಗೂ ವಿಶೇಷ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ವರದಿ ಒತ್ತಾಯಿಸಿದೆ.
ಪ್ರಮುಖ ಶಿಫಾರಸುಗಳು:
- ಗಡಿ ತಾಲೂಕಿನ ಪ್ರತಿ ಹೋಬಳಿಯಲ್ಲಿ ಕನ್ನಡ ಮಾಧ್ಯಮ ವಸತಿ ಶಾಲೆ ಸ್ಥಾಪನೆ.
- ಹೊರರಾಜ್ಯದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಶೇ.5 ಸಮತಲ ಮೀಸಲಾತಿಯೊಂದಿಗೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಉನ್ನತ ಶಿಕ್ಷಣ ಮೀಸಲಾತಿಗೆ ಮಾತೃಭಾಷೆಯ ಷರತ್ತು ವಿನಾಯಿತಿ.
- ಗಡಿ ಹಾಗೂ ಹೊರರಾಜ್ಯದ ಕನ್ನಡ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳು ಹಾಗೂ ಶಿಕ್ಷಕರ ನೇಮಕಕ್ಕೆ ಆದ್ಯತೆ.
- ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ಹೊರರಾಜ್ಯದ ಕನ್ನಡ ಶಾಲೆಗಳಿಗೆ ವಿಸ್ತರಿಸಿ, ಧನಸಹಾಯದ ಮೂಲಕ ಶಿಕ್ಷಕರ ನೇಮಕ.