ಪ್ಯಾರಿಸ್, ಜೂ. 11 : ಭಾರತದಲ್ಲಿ ಬಡತನ, ಅಸಮಾನತೆ ಹಾಗೂ ಸಾಮಾಜಿಕ ಭದ್ರತೆ ಕುರಿತ ಮಹತ್ವದ ಅಧ್ಯಯನ ಮತ್ತು ಸಂಶೋಧನೆಗಾಗಿ ಅರ್ಥಶಾಸ್ತ್ರಜ್ಞ ಜೀನ್ ಡ್ರೇಝ್ ಅವರಿಗೆ ಜಾಗತಿಕ ಅಸಮಾನತೆ ಸಂಶೋಧನಾ ಪ್ರಶಸ್ತಿ ಲಭಿಸಿದೆ.
ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಶುಕ್ರವಾರ ನಡೆದ ವಿಶ್ವ ಅಸಮಾನತೆ ಸಮ್ಮೇಳನದಲ್ಲಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತದಲ್ಲಿ ಬಡತನ ಮತ್ತು ಆರ್ಥಿಕ ಅಸಮಾನತೆ ಕುರಿತ ಸಂಶೋಧನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನ ಕುರಿತು ಅವರು ನಡೆಸಿದ ಅಧ್ಯಯನ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜೀನ್ ಡ್ರೇಝ್, ಈ ಗೌರವ ತಮ್ಮೊಬ್ಬರ ಸಾಧನೆಯ ಫಲವಲ್ಲ ಎಂದು ಹೇಳಿದರು. ತಾವು ಕೈಗೊಂಡ ಪ್ರತಿಯೊಂದು ಕಾರ್ಯದ ಹಿಂದೆ ಅನೇಕ ಜನರ ಸಹಕಾರ, ಬೆಂಬಲ ಮತ್ತು ಸಾಮೂಹಿಕ ಪ್ರಯತ್ನ ಅಡಗಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಕೇವಲ ಆರ್ಥಿಕ ಅಸಮಾನತೆ ಮಾತ್ರವಲ್ಲದೆ ಜಾತಿ, ಲಿಂಗ ಮತ್ತು ಶಿಕ್ಷಣದ ಅವಕಾಶಗಳಲ್ಲಿಯೂ ವ್ಯಾಪಕ ಅಸಮಾನತೆಗಳಿವೆ. ಆದರೆ ಇಂತಹ ಅಸಮಾನತೆಗಳ ವಿರುದ್ಧ ದೀರ್ಘಕಾಲದಿಂದ ಹೋರಾಟ ನಡೆಸಿದ ಸಮೃದ್ಧ ಇತಿಹಾಸವೂ ದೇಶಕ್ಕಿದೆ. ಅಂತಹ ಹಲವು ಚಳವಳಿಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವುದು ತಮ್ಮ ಭಾಗ್ಯ ಎಂದು ಅವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ಅಸಮಾನತೆಗಳ ಕುರಿತು ಅರಿವು ಮೂಡಿಸುವುದು ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಸಂಶೋಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತದೆ. ಇದು ಪ್ರಶಸ್ತಿಯ ಎರಡನೇ ಆವೃತ್ತಿಯಾಗಿದೆ.
ಈ ಹಿಂದೆ 2024ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಸಾಮಾಜಿಕ ಮತ್ತು ಪರಿಸರ ಅಸಮಾನತೆಗಳ ಕುರಿತ ಅಧ್ಯಯನಕ್ಕಾಗಿ ಬಿನಾ ಅಗರ್ವಾಲ್ ಹಾಗೂ ಜೇಮ್ಸ್ ಕೆ. ಬಾಯ್ಸ್ ಅವರಿಗೆ ಜಂಟಿಯಾಗಿ ಈ ಗೌರವ ಲಭಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ಜೀನ್ ಡ್ರೇಝ್ ಅವರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದುರ್ಬಲಗೊಳಿಸುವ ಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದರು. ಅಲ್ಲದೆ ಆಹಾರ ಪಡಿತರ ಪಡೆಯಲು ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿರುವ ಕ್ರಮವನ್ನೂ ಪ್ರಶ್ನಿಸಿದ್ದರು.
ಆಧಾರ್ ದೃಢೀಕರಣದ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ಆಹಾರ ಪಡಿತರ ನಿರಾಕರಿಸಲಾಗುತ್ತಿರುವ ಬಗ್ಗೆ ಅವರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಬಡವರ ಹಕ್ಕುಗಳ ರಕ್ಷಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.