ಬೆಂಗಳೂರು, ಜೂ. 4 : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ರಚನೆಯಾದ ಹೊಸ ಸರಕಾರ ವಾಸ್ತವದಲ್ಲಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ರಿಮೋಟ್ ಕಂಟ್ರೋಲ್ನಿಂದ ನಡೆಯಲಿದ್ದು, ಜನರಿಗೆ ಯಾವುದೇ ಹೊಸ ನಿರೀಕ್ಷೆ ಮೂಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಗಿರುವುದು ಹಳೆಯ ಚಿತ್ರದ ಪೋಸ್ಟರ್ ಬದಲಾದಂತಿದೆ. ಮುಖ್ಯಮಂತ್ರಿಗಳ ನಿವಾಸದ ಮುಂದೆ ಇರುವ ಫಲಕದಲ್ಲಿ ಹೆಸರು ಬದಲಾಗಿದೆಯೇ ಹೊರತು ಜನರ ಸಮಸ್ಯೆಗಳು ಬದಲಾಗಿಲ್ಲ. ಹೊಸ ಸರಕಾರದಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದರೂ ಸಚಿವ ಸಂಪುಟದಲ್ಲಿ ಹೊಸತನ ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಚಿವರಾಗಿರುವುದನ್ನು ಬಿಟ್ಟರೆ ಹೊಸದೇನೂ ಇಲ್ಲ ಎಂದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಐಪಿಎಲ್ ಸಂಭ್ರಮಾಚರಣೆ ವೇಳೆ 11 ಅಮಾಯಕರ ಸಾವು, ಭ್ರಷ್ಟಾಚಾರದ ಒತ್ತಡದಿಂದ ಅಧಿಕಾರಿಗಳ ಸಾವು, ಬಾಣಂತಿಯರ ಸಾವು, ಮೈಕ್ರೋ ಫೈನಾನ್ಸ್ ಕಿರುಕುಳ, ರಸ್ತೆ ಗುಂಡಿಗಳ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಮುಂದುವರಿದಿವೆ. ಜನರು ಉತ್ತಮ ಆಡಳಿತ ನಿರೀಕ್ಷಿಸಿದ್ದರೆ ಕಾಂಗ್ರೆಸ್ ಕೇವಲ ಕುರ್ಚಿ ಬದಲಾವಣೆ ಮಾಡಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಪದಗ್ರಹಣದ ಬಳಿಕ ಬೆಂಗಳೂರಿನಾದ್ಯಂತ ಕಟೌಟ್ ಹಾಗೂ ಬ್ಯಾನರ್ಗಳು ಅಳವಡಿಸಲಾಗಿವೆ. ಫಲಕಗಳನ್ನು ಹಾಕಬೇಡಿ ಎಂದು ಮುಖ್ಯಮಂತ್ರಿ ಹೇಳಿದ್ದರೂ ಅದು ಜಾರಿಯಾಗಿಲ್ಲ. ಅಂದರೆ ಮುಖ್ಯಮಂತ್ರಿಯ ಮಾತಿಗೆ ಬೆಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ಹೊಸ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಇದು ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಹೇಳಿದರು.
ಪ್ರಮಾಣವಚನದ ವೇಳೆ ಡಿ.ಕೆ.ಶಿವಕುಮಾರ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡಿದ್ದರೂ ಸಚಿವ ಸಂಪುಟ ರಚನೆಯಲ್ಲಿ ಅವರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲ ನಿರ್ಧಾರಗಳನ್ನು ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಕೈಗೊಂಡಿದೆ ಎಂದು ಲೇವಡಿ ಮಾಡಿದರು.
ಇ-ಖಾತಾ ಹೆಸರಿನಲ್ಲಿ ಬೆಂಗಳೂರಿನಲ್ಲಿ ದಂಧೆ ನಡೆಯುತ್ತಿದ್ದು, ಅದನ್ನು ರಾಜ್ಯದಾದ್ಯಂತ ವಿಸ್ತರಿಸಿದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲಿದೆ. ಸರ್ವರ್ ಸಮಸ್ಯೆ ಹೆಸರಿನಲ್ಲಿ ಜನರನ್ನು ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
56,000 ಸರ್ಕಾರಿ ಹುದ್ದೆಗಳ ನೇಮಕಾತಿ ಭರವಸೆ ವಾಸ್ತವಕ್ಕೆ ದೂರವಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿರುವಾಗ ಇಷ್ಟೊಂದು ನೇಮಕಾತಿ ಸಾಧ್ಯವಿಲ್ಲ ಎಂದು ಹೇಳಿದರು.
ಭಾರತ್ ಜೋಡೊ ಸಂಘಟನೆ ಸರಕಾರದ ಕೆಲಸವಲ್ಲ. ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಪಾವತಿ, ಶಾಲೆಗಳ ಮೂಲಸೌಕರ್ಯ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಬದಲು ಘೋಷಣೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯದ ನೈಜ ಆರ್ಥಿಕ ಸ್ಥಿತಿಯನ್ನು ಜನರ ಮುಂದಿಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಣಕಾಸಿನ ಶ್ವೇತಪತ್ರ ಮಂಡಿಸಬೇಕು ಎಂದು ಆರ್.ಅಶೋಕ ಆಗ್ರಹಿಸಿದರು.