ಮಥುರಾ, ಮೇ 23 : ಯಮುನಾ ನದಿಯಲ್ಲಿನ ಹೆಚ್ಚುತ್ತಿರುವ ಮಾಲಿನ್ಯ ಮತ್ತು ನಗರದ ಅಸ್ವಚ್ಛತೆಗೆ ವಿರೋಧವಾಗಿ ಸಾಮಾಜಿಕ ಕಾರ್ಯಕರ್ತನೊಬ್ಬ ಜಿರಳೆ ವೇಷ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ಮಥುರಾದಲ್ಲಿ ಗಮನ ಸೆಳೆದಿದೆ.
ಜಿರಳೆ ವೇಷ ಧರಿಸಿದ್ದ ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ, ಹಾಡುತ್ತಾ ಮತ್ತು ನೃತ್ಯ ಮಾಡುತ್ತಾ ಪುರಸಭೆ ಕಚೇರಿಗೆ ಆಗಮಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಮುನಾ ನದಿಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಯಮುನಾದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಅವರು ಎಚ್ಚರಿಸಿದರು.
ಯಮುನಾ ಮಾಲಿನ್ಯ ಹಾಗೂ ನಗರದಲ್ಲಿ ವ್ಯಾಪಕವಾಗಿರುವ ಕೊಳಕಿನ ಬಗ್ಗೆ ಅಧಿಕಾರಿಗಳ ಕಣ್ಣು ತೆರೆಯಿಸಲು ತಾನು ಜಿರಳೆ ವೇಷ ಧರಿಸಬೇಕಾಯಿತು ಎಂದು ದೀಪಕ್ ಶರ್ಮಾ ಹೇಳಿದರು.
ಮಥುರಾ ಹಾಗೂ ವೃಂದಾವನ ಪ್ರದೇಶಗಳಲ್ಲಿ ಕಲುಷಿತ ನೀರು ಮತ್ತು ಕೊಳಚೆ ನೀರು ನೇರವಾಗಿ ಯಮುನಾ ನದಿಗೆ ಸೇರುತ್ತಿದೆ. ಆದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ಬ್ರಜ್ ಪ್ರದೇಶದ ಜನರು ಯಮುನಾ ನೀರನ್ನು ಪವಿತ್ರವೆಂದು ಪರಿಗಣಿಸಿ ಆಚಮನ ಮಾಡುತ್ತಾರೆ. ಆದರೆ ನದಿಯನ್ನು ಸ್ವಚ್ಛಗೊಳಿಸುವ ಭರವಸೆಗಳು ಕೇವಲ ಮಾತಿನಲ್ಲೇ ಉಳಿದಿವೆ ಎಂದು ಶರ್ಮಾ ಬೇಸರ ವ್ಯಕ್ತಪಡಿಸಿದರು.
ಜಿರಳೆ ವೇಷದಲ್ಲಿದ್ದ ಶರ್ಮಾರನ್ನು ನೋಡಲು ಪುರಸಭೆ ಕಚೇರಿ ಬಳಿ ಜನಸಮೂಹ ಸೇರಿತ್ತು. ಹಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ಪ್ರತಿಭಟನೆಯ ದೃಶ್ಯಗಳನ್ನು ಚಿತ್ರೀಕರಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಕಾಕ್ರೋಚ್ ಜನತಾ ಪಕ್ಷ ಎಂಬ ವಿಡಂಬನಾತ್ಮಕ ಅಭಿಯಾನದ ಬಳಿಕ ಈ ಪ್ರತಿಭಟನೆ ಮತ್ತಷ್ಟು ಗಮನ ಸೆಳೆದಿದೆ. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಈ ಅಭಿಯಾನ ಆರಂಭವಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆ ವೇಳೆ ಜಿರಳೆಗಳು ಮತ್ತು ಪರಾವಲಂಬಿಗಳ ಕುರಿತು ಮಾಡಿದ ಉಲ್ಲೇಖದ ಬಳಿಕ ಈ ರೀತಿಯ ಪ್ರತಿಭಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.