ಮೈಸೂರು, ಮೇ 14 : ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳು ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಧರಿಸಬಹುದು. ಆದರೆ ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಟಿ.ಕೆ.ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುತ್ತಿರುವ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶವಿದೆ. ಆದರೆ ಹೊಸದಾಗಿ ವಿವಾದ ಸೃಷ್ಟಿಸುವ ರೀತಿಯ ಆಚರಣೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕೇಸರಿ ಶಾಲು ಧರಿಸುವಂತಿಲ್ಲ. ಆದರೆ ಜನಿವಾರ, ಉಡುದಾರ, ಹಿಜಾಬ್, ರುದ್ರಾಕ್ಷಿ ಸೇರಿದಂತೆ ವ್ಯಕ್ತಿಗಳ ನಂಬಿಕೆಗೆ ಸಂಬಂಧಿಸಿದ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಇದು ಹೊಸ ನಿಯಮವಲ್ಲ, ಈಗಾಗಲೇ ನಡೆದುಕೊಂಡು ಬಂದಿರುವ ಪದ್ಧತಿಯೇ ಆಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಇಂಧನ ಬಳಕೆ ಕಡಿತಗೊಳಿಸುವ ಉದ್ದೇಶದಿಂದ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅದು ತಾತ್ಕಾಲಿಕ ಕ್ರಮ ಮಾತ್ರ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೇರೆ ದೇಶಗಳೊಂದಿಗೆ ಚರ್ಚೆ ನಡೆಸಿ ಒಮ್ಮತಕ್ಕೆ ಬರುವುದು ಮುಖ್ಯ ಎಂದು ಹೇಳಿದರು.
ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಕರೆದಾಗ ಮಾತ್ರ ದೆಹಲಿಗೆ ಹೋಗುತ್ತೇನೆ. ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ. ಸಂಪುಟ ಪುನರ್ ರಚನೆ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.