ಹೊಸದಿಲ್ಲಿ, ಮೇ 23 : ನೀಟ್-ಯುಜಿ ಪರೀಕ್ಷೆಯ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಜ್ಞೆಯೊಬ್ಬರನ್ನು ಸಿಬಿಐ ಬಂಧಿಸಿದೆ.
ಮಹಾರಾಷ್ಟ್ರದ ಪುಣೆಯ ಸೇಥ್ ಹಿರಾಲಾಲ್ ಸರಾಫ್ ಪ್ರಶಾಲಾದಲ್ಲಿ ಉದ್ಯೋಗದಲ್ಲಿರುವ ಮನೀಷಾ ಸಂಜಯ್ ಹವಾಲ್ದಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಹವಾಲ್ದಾರ್ ಅವರನ್ನು ಕೇಂದ್ರ ತನಿಖಾ ದಳ ವಿಚಾರಣೆ ನಡೆಸಿದ ಬಳಿಕ ಬಂಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಮೇ 16ರಂದು ಬಂಧನಕ್ಕೊಳಗಾಗಿದ್ದ ಸಹ ಆರೋಪಿ ಹಾಗೂ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಮಾಂಧರೆ ಜೊತೆ ಸೇರಿ ನೀಟ್-ಯುಜಿ ಪರೀಕ್ಷೆಯ ಹಲವಾರು ಭೌತಶಾಸ್ತ್ರ ಪ್ರಶ್ನೆಗಳನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾರೆ.
ಹವಾಲ್ದಾರ್ ಹಂಚಿಕೊಂಡಿದ್ದ ಪ್ರಶ್ನೆಗಳು 2026ರ ನೀಟ್-ಯುಜಿ ಪರೀಕ್ಷೆಯಲ್ಲಿ ಕೇಳಲಾದ ಭೌತಶಾಸ್ತ್ರ ಪ್ರಶ್ನೆಗಳೊಂದಿಗೆ ಹೊಂದಿಕೆಯಾಗಿವೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹವಾಲ್ದಾರ್ ಪಾತ್ರ ಮಹತ್ವದ್ದಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಮಾಂಧರೆಯನ್ನು ಮೇ 16ರಂದು ಬಂಧಿಸಿತ್ತು.
ನೀಟ್ ಪರೀಕ್ಷೆಗೂ ಮುನ್ನವೇ ಕೆಲವು ಆಕಾಂಕ್ಷಿಗಳಿಗೆ ಪ್ರಶ್ನೆಗಳು ತಲುಪಿದ್ದವು ಎಂಬ ಆರೋಪದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಿದೆ. ಇನ್ನೂ ಕೆಲವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.