ಹೊಸದಿಲ್ಲಿ, ಎ.30 : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ನೌಕಾಪಡೆ ಜಂಟಿಯಾಗಿ ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿಯಲ್ಲಿ ಹೆಲಿಕಾಪ್ಟರ್ ವೇದಿಕೆಯಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸುವ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿವೆ.
ಈ ಪ್ರಯೋಗದಲ್ಲಿ ಅಲ್ಪ ಅವಧಿಯಲ್ಲೇ ಒಂದೇ ಹೆಲಿಕಾಪ್ಟರ್ನಿಂದ ಎರಡು ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಅತ್ಯಾಧುನಿಕ ವಾಯುವಿನಿಂದ ಉಡಾಯಿಸಲಾಗುವ ಹಡಗು ನಿಗ್ರಹ ವ್ಯವಸ್ಥೆಯ ಪ್ರಥಮ ಯಶಸ್ವಿ ಪರೀಕ್ಷೆಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಎನ್ಎಎಸ್ಎಂ-ಎಸ್ಆರ್ ಎಂಬ ಅಲ್ಪದೂರ ಸಾಮರ್ಥ್ಯದ ಹಡಗು ನಿಗ್ರಹ ಕ್ಷಿಪಣಿ ಭಾರತದ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ವಾಯು ಆಧಾರಿತ ಕ್ಷಿಪಣಿಯಾಗಿದೆ. ಇದು ಸಮುದ್ರಮಟ್ಟದ ಸಮೀಪದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 55 ಕಿಲೋಮೀಟರ್ ದೂರವರೆಗೆ ದಾಳಿ ನಡೆಸಬಲ್ಲದು. ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಯಾವುದೇ ಸಮಯದಲ್ಲಿ ಕಾರ್ಯಾಚರಣೆ ನಡೆಸುವ ‘ಫೈರ್-ಅಂಡ್-ಫರ್ಗೆಟ್’ ತಂತ್ರಜ್ಞಾನವನ್ನು ಹೊಂದಿದೆ.
ಪ್ರಯೋಗದ ವೇಳೆ ದೂರ ಮತ್ತು ಚಲನವಲನವನ್ನು ಗಮನಿಸಲು ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆ ಹಾಗೂ ಟೆಲೆಮೆಟ್ರಿ ಸೌಲಭ್ಯಗಳನ್ನು ಬಳಸಿ ಚಂಡೀಪುರದ ಸಮಗ್ರ ಪರೀಕ್ಷಾ ಕ್ಷೇತ್ರದಲ್ಲಿ ದತ್ತಾಂಶ ಸಂಗ್ರಹಿಸಲಾಯಿತು. ಕ್ಷಿಪಣಿಯ ಕಾರ್ಯಕ್ಷಮತೆ ಎಲ್ಲ ಮಾನದಂಡಗಳಿಗೆ ಅನುಗುಣವಾಗಿರುವುದು ದೃಢಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಪರೀಕ್ಷೆಯಿಂದ ಕ್ಷಿಪಣಿಯ ಉಡಾವಣಾ ಸಾಮರ್ಥ್ಯ ಮಾತ್ರವಲ್ಲದೇ, ಸಮುದ್ರಮಟ್ಟದಲ್ಲಿ ಗುರಿ ಹೊಡೆದಿಳಿಸುವ ನಿಖರತೆ ಮತ್ತು ದಾಳಿಯ ಸಾಮರ್ಥ್ಯವೂ ಯಶಸ್ವಿಯಾಗಿ ಸಾಬೀತಾಗಿದೆ.