ಹೊಸದಿಲ್ಲಿ, ಆಗಸ್ಟ್ 1: ಇ20 ಇಂಧನ ನೀತಿಯನ್ನು ವಿರೋಧಿಸಿ ಗಾಂಧಿ ಸ್ಮಾರಕದ ಬಳಿ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದ ಸಾಮಾಜಿಕ ಹೋರಾಟಗಾರ ತಹಸೀನ್ ಪೂನಾವಾಲಾ, ದಿಲ್ಲಿ ಪೊಲೀಸರು ತಮ್ಮನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಶನಿವಾರ ಆರೋಪಿಸಿದ್ದಾರೆ.
ಎಥನಾಲ್ ಮಿಶ್ರಿತ ಇಂಧನ ನೀತಿಯ ವಿರುದ್ಧ ಅಭಿಯಾನ ನಡೆಸುತ್ತಿರುವ ಪೂನಾವಾಲಾ, ತಮ್ಮ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿರುವ ಹಲವು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಪೂರ್ಣ ಪೊಲೀಸ್ ಪಡೆ ತಮ್ಮ ನಿವಾಸದ ಹೊರಗೆ ನಿಯೋಜನೆಯಾಗಿದ್ದು, ತಮಗೆ ಹೊರಹೋಗಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಮತ್ತೊಂದು ವೀಡಿಯೊದಲ್ಲಿ, ಯಾವುದೇ ಅಧಿಕೃತ ಆದೇಶ ಅಥವಾ ದಾಖಲೆಗಳಿಲ್ಲದೆ ತಮ್ಮನ್ನು ಹೇಗೆ ನಿರ್ಬಂಧಿಸಬಹುದು ಎಂದು ಪೊಲೀಸ್ ಅಧಿಕಾರಿಯನ್ನು ಪೂನಾವಾಲಾ ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೇವಲ 15 ದಿನಗಳು ಬಾಕಿಯಿರುವ ಸಂದರ್ಭದಲ್ಲಿ ತಮ್ಮನ್ನು ಗೃಹಬಂಧನದಲ್ಲಿಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಉದ್ದೇಶಿತ ಪ್ರತಿಭಟನಾ ಮೆರವಣಿಗೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿ, ಸಹಕರಿಸುವಂತೆ ಮನವಿ ಮಾಡಿದರು.
ಆರಂಭದಲ್ಲಿ ಸಂಸತ್ವರೆಗೆ ‘ಗಾಡಿ ಮಾರ್ಚ್’ ಹಮ್ಮಿಕೊಳ್ಳುವುದಾಗಿ ಪೂನಾವಾಲಾ ಘೋಷಿಸಿದ್ದರು. ಆದರೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಗಾಂಧಿ ಸ್ಮಾರಕದ ಬಳಿ ಏಕಾಂಗಿ ಪಾದಯಾತ್ರೆ, ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಜುಲೈ 31ರಂದು ಪ್ರಕಟಿಸಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇಕಡಾ 20 ಎಥನಾಲ್ ಮತ್ತು ಶೇಕಡಾ 80 ಪೆಟ್ರೋಲ್ ಮಿಶ್ರಣದ ಇ20 ಇಂಧನ ನೀತಿ ವಿರೋಧ ಪಕ್ಷಗಳು ಹಾಗೂ ಕೆಲವು ಗ್ರಾಹಕ ಸಂಘಟನೆಗಳ ಟೀಕೆಗೆ ಗುರಿಯಾಗಿದೆ. ವಾಹನ ಸವಾರರಿಗೆ ಇ20 ಮಾತ್ರವಲ್ಲದೆ ಶೇಕಡಾ 100 ಶುದ್ಧ ಪೆಟ್ರೋಲ್, ಇ5 ಹಾಗೂ ಇ10 ಇಂಧನಗಳ ಆಯ್ಕೆಯೂ ಪೆಟ್ರೋಲ್ ಬಂಕ್ಗಳಲ್ಲಿ ಲಭ್ಯವಾಗಬೇಕು ಎಂಬುದು ಪೂನಾವಾಲಾ ನೇತೃತ್ವದ ‘ಟೀಮ್ ಭಾರತ್’ ಪ್ರಮುಖ ಬೇಡಿಕೆಯಾಗಿದೆ.
ಈ ಸಂಬಂಧ ‘ಟೀಮ್ ಭಾರತ್’ ಪ್ರತಿನಿಧಿಗಳು ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.
