LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇಲ್ಲ : ಬಿ.ಕೆ. ಹರಿಪ್ರಸಾದ

ಬೆಂಗಳೂರು, ಆಗಸ್ಟ್‌ 4: ರಾಜ್ಯ ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನ ಉಂಟಾಗಿಲ್ಲ. ಅಸಮಾಧಾನವಿದ್ದರೆ ಅದು ಬಿಜೆಪಿಯಲ್ಲೇ ಇದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇಲ್ಲ, ಆದರೆ ಬಿಜೆಪಿಯಲ್ಲಿ ನಾಯಕತ್ವದ ಅಭಾವ ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿದರು.

ನಗರದ ಕ್ವೀನ್ಸ್ ರಸ್ತೆಯ ಇಂದಿರಾ ಭವನದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ತೀರ್ಮಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರು ಸಮಾಲೋಚನೆಯೊಂದಿಗೆ ಕೈಗೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೆ.ಸಿ. ವೇಣುಗೋಪಾಲ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಭಾಗಿಯಾಗಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ನಾಲ್ಕು-ಐದು ಬಾರಿ ಶಾಸಕರಾಗಿ ಆಯ್ಕೆಯಾದ ಅನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 140 ಶಾಸಕರಲ್ಲಿ 48 ಮಂದಿ ಮಾತ್ರ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಉಳಿದವರು ಅನುಭವಿಗಳಾಗಿದ್ದಾರೆ. ಪೌರಕಾರ್ಮಿಕ ದಂಪತಿಯ ಪುತ್ರನಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ನಿರ್ಮಿಸಿದೆ. ಇಂತಹ ಸಾಮಾಜಿಕ ನ್ಯಾಯದ ಉದಾಹರಣೆಯನ್ನು ಬಿಜೆಪಿ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಹಿಂದಿನ ಬೊಮ್ಮಾಯಿ ಸರ್ಕಾರದಲ್ಲಿ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಇರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಹುತೇಕ ಎಲ್ಲ ಜಿಲ್ಲೆಗಳಿಗೆ ಅವಕಾಶ ಕಲ್ಪಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕ್ರೈಸ್ತರು, ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಎಲ್ಲರನ್ನು ಒಳಗೊಂಡ ಸರ್ಕಾರವನ್ನು ರೂಪಿಸಿದೆ ಎಂದು ಅವರು ಹೇಳಿದರು.

ಸಂಪುಟದಲ್ಲಿ ಅವಕಾಶ ಸಿಗದವರಿಗೆ ಬೇಸರ ಆಗುವುದು ಸಹಜ. ಆದರೆ ಪಕ್ಷದ ಮಟ್ಟದಲ್ಲಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಕೆಲಸ ಮಾಡಲಾಗುವುದು. ಸರ್ಕಾರದಲ್ಲಿರುವವರು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸುವುದು ಮುಖ್ಯಮಂತ್ರಿಗಳ ಅಧಿಕಾರ. ಪಕ್ಷದ ಹುದ್ದೆಗಳಿಗೆ ಸಂಬಂಧಿಸಿದ ರಾಜೀನಾಮೆ ನನ್ನ ಬಳಿ ಬಂದರೆ ಚರ್ಚಿಸಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಸಮುದಾಯಗಳನ್ನು ಒಂದೇ ಬಾರಿ ತೃಪ್ತಿಪಡಿಸಲು ಸಾಧ್ಯವಿಲ್ಲ. ಈ ಬಾರಿ ಪ್ರಾತಿನಿಧ್ಯದಿಂದ ವಂಚಿತ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಇನ್ನೂ ಹಲವು ಸಮುದಾಯಗಳಿಗೆ ಅವಕಾಶ ಕಲ್ಪಿಸಬೇಕಿದ್ದು, ಮುಂದಿನ ದಿನಗಳಲ್ಲಿ ಅದಕ್ಕೂ ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಎಂ. ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರ ಬೆಂಬಲಿಗರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ಬರೊಂದಿಗೂ ಈಗಾಗಲೇ ಮಾತುಕತೆ ನಡೆಸಿದ್ದು, ಸಮಾಧಾನದಿಂದ ಇರಲು ಮನವಿ ಮಾಡಿದ್ದೇನೆ. ಮತ್ತೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಎರಡು ಬಾರಿ ಗೆದ್ದಿರುವ ನಾಯಕರಿಗೆ ಅವಕಾಶ ಸಿಗದಿದ್ದರೆ ಬೇಸರವಾಗುವುದು ಸಹಜ. ಪ್ರಿಯಾ ಕೃಷ್ಣ ಯುವ ನಾಯಕಿಯಾಗಿದ್ದು, ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿದೆ ಎಂದು ಹೇಳಿದರು.

ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಬೇಸರದ ಸಂಗತಿ ಎಂದು ಒಪ್ಪಿಕೊಂಡ ಹರಿಪ್ರಸಾದ, ಅವರ ಸಮುದಾಯಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ ಎಂದು ಹೇಳಿದರು. ಗಾಯತ್ರಿ ಶಾಂತೇಗೌಡ ಅವರಿಗೆ ಕೊನೆಯ ಕ್ಷಣದಲ್ಲಿ ಅವಕಾಶ ತಪ್ಪಿದ ವಿಚಾರ ಪಕ್ಷದ ಆಂತರಿಕ ವಿಷಯವಾಗಿದ್ದು, ಸೂಕ್ತ ಸಂದರ್ಭದಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಚರ್ಚೆ ನಡೆಸುವುದಾಗಿ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇಲ್ಲ : ಬಿ.ಕೆ. ಹರಿಪ್ರಸಾದಎರಡು ವಾರಗಳ ಪ್ರತಿಭಟನೆ 24 ವರ್ಷದ ಮೋದಿ ರಾಜಕೀಯ ವರ್ಚಸ್ಸನ್ನೇ ಅಲುಗಾಡಿಸಿದೆ: ಅರುಂಧತಿ ರಾಯ್ಧಾರವಾಡ ಜಿಲ್ಲೆಯಲ್ಲಿ ಮೂರು ದಿನ ಸಚಿವ ಸಂತೋಷ ಲಾಡ್‌ ಪ್ರವಾಸ; ಅತಿವೃಷ್ಟಿ-ಬರ ಪರಿಸ್ಥಿತಿ ಪರಿಶೀಲನೆಅನುಭವಿಗಳಿಂದ ಹೊಸ ಮುಖಗಳವರೆಗೆ: ಸಚಿವ ಸಂಪುಟ ಸೇರಿದ 19 ಶಾಸಕರ ರಾಜಕೀಯ ಪಯಣಮಳೆ ಅಬ್ಬರಕ್ಕೆ ರಾಜ್ಯ ತತ್ತರ : ಜಲಾಶಯಗಳು ಭರ್ತಿ, ನದಿ-ಹಳ್ಳಗಳು ಅಪಾಯದ ಮಟ್ಟಕ್ಕೆಸಂಪುಟ ವಿಸ್ತರಣೆಯಲ್ಲೇ ಕೊನೆ ಕ್ಷಣದ ಬದಲಾವಣೆ: 19 ಮಂದಿಗೆ ಮಾತ್ರ ಸ್ಥಾನಕಾಂಗ್ರೆಸ್ ಮೇಲಿನ ನಂಬಿಕೆ ಕುಸಿದಿದೆ : ತನ್ವೀರ ಸೇಠ್ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಮೊದಲ ರಾಜಕೀಯ ಗೆಲುವುಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡಗರ್ಭಪಾತ ಜಾಲದ ಬೆಚ್ಚಿಬೀಳಿಸುವ ಸತ್ಯ: ‘ಗಂಡು ಮಗು’ ಔಷಧಿ ಹೆಸರಿನಲ್ಲಿ ವಂಚನೆ