ಬೆಳಗಾವಿ, ಆ. 1: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 'ಬಸವ ಅಧ್ಯಯನ ಪೀಠ' ಸ್ಥಾಪಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಂತೋಷ ಕಾಮಗೌಡ ಮತ್ತು ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ ಕಂಬಾರ ಅವರನ್ನು ಗೌರವಿಸಿ ಅಭಿನಂದಿಸಿದರು.
ವಿಶ್ವಗುರು ಬಸವಣ್ಣನವರ ಚಿಂತನೆ, ತತ್ವ ಹಾಗೂ ಸಾಮಾಜಿಕ ಕೊಡುಗೆಗಳ ಅಧ್ಯಯನಕ್ಕಾಗಿ ವಿಶೇಷ ಅಧ್ಯಯನ ಪೀಠ ಸ್ಥಾಪಿಸುವಂತೆ ಜಾಗತಿಕ ಲಿಂಗಾಯಿತ ಮಹಾಸಭೆಯ ಪ್ರಧಾನ ಕಚೇರಿಯ ಡಾ. ಎಸ್. ಎಂ. ಜಾಮದಾರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರ ನೇತೃತ್ವದ ನಿಯೋಗವು ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದೀಗ ಆ ಮನವಿ ಕಾರ್ಯರೂಪಕ್ಕೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ತ್ಯಾಗರಾಜ, ರಿಜಿಸ್ಟ್ರಾರ್ ಸಂತೋಷ ಕಾಮಗೌಡ, ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ ಕಂಬಾರ ಸೇರಿದಂತೆ ಅಧ್ಯಯನ ಪೀಠ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಸಮಸ್ತ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಖಜಾಂಚಿ ಮುರಗೆಪ್ಪ ಬಾಳಿ, ಸಿ. ಎಂ. ಬೂದಿಹಾಳ, ಪ್ರವೀಣ ಚಿಕ್ಕಲಿ, ಶಂಕರ ಗುಡುಸ, ಅಶೋಕ ಬೆಂಡಿಗೇರಿ, ಶಿವಾನಂದ ಮೇಟ್ಯಾಳ, ಆನಂದ ಗುಡುಸ, ಮಹಾನಂದ ಪರುಶೆಟ್ಟಿ, ಶೋಭಾ ಶಿವಳ್ಳಿ, ಕಾವೇರಿ ಕಿಲಾರಿ, ರತ್ನಾ ಬೆಣಚಿನಮರಡಿ, ಗುರುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
