ಪಣಜಿ, ಜುಲೈ 21: ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ‘ಸಂಸತ್ ಚಲೊ’ ಪ್ರತಿಭಟನೆಯನ್ನು ಟೀಕಿಸುವ ಭರದಲ್ಲಿ ಗೋವಾ ಬಿಜೆಪಿ ಹಿರಿಯ ನಾಯಕ ನರೇಂದ್ರ ಸವಾಯ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿವಾದಾತ್ಮಕ ಪೋಸ್ಟ್ಗೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರವನ್ನು ಪ್ರಶ್ನಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ‘ಗೆದ್ದಲು’ ಹಾಗೂ ‘ಜಿರಳೆ’ಗಳಿಗೆ ಹೋಲಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.
ಸವಾಯ್ಕರ್ ಅವರು ಎಕ್ಸ್ನಲ್ಲಿ ಭಾರತದ ನಕ್ಷೆಯ ಮೇಲೆಯೇ ಗೆದ್ದಲು ಮತ್ತು ಜಿರಳೆಗಳು ಹರಡಿಕೊಂಡಿರುವಂತೆ ಚಿತ್ರವೊಂದನ್ನು ಹಂಚಿಕೊಂಡಿದ್ದು, ‘ಗೆದ್ದಲುಗಳ ಜತೆ ಜಿರಳೆಗಳು! ದೇಶವನ್ನು ಉಳಿಸಿ!’ ಎಂಬ ಶೀರ್ಷಿಕೆ ನೀಡಿದ್ದರು. ಈ ಪೋಸ್ಟ ವೈರಲ್ ಆಗಿದ್ದು, ವ್ಯಾಪಕ ಟೀಕೆಗೂ ಗುರಿಯಾಗಿದೆ.
ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಪ್ರಯತ್ನವೇ ಈ ಪೋಸ್ಟ್ನಲ್ಲಿ ಅಡಕವಾಗಿದೆ. ರಾಜಕೀಯ ಭಿನ್ನಾಭಿಪ್ರಾಯವನ್ನು ಕೀಳುಮಟ್ಟದ ಭಾಷೆಯ ಮೂಲಕ ವ್ಯಕ್ತಪಡಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತರುವ ನಡೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಗೋವಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸುನಿಲ್ ಕೌತಂಕರ್, ಮುಂದಿನ 24 ಗಂಟೆಗಳೊಳಗೆ ನರೇಂದ್ರ ಸವಾಯ್ಕರ್ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜೆಯ ಪ್ರಜಾಸತ್ತಾತ್ಮಕ ಹಕ್ಕು. ಸರ್ಕಾರದ ವಿರುದ್ಧದ ಟೀಕೆಯನ್ನು ದೇಶದ್ರೋಹ ಎಂದು ಬಿಂಬಿಸುವುದು ಬಿಜೆಪಿಯ ಅಪಾಯಕಾರಿ ರಾಜಕೀಯ ಸಂಸ್ಕೃತಿಯಾಗಿದೆ. ಬಿಜೆಪಿ ಎಂದರೆ ದೇಶವಲ್ಲ ಎಂಬುದನ್ನು ಅದರ ನಾಯಕರು ಅರಿಯಬೇಕು ಎಂದು ಅವರು ಕಿಡಿಕಾರಿದರು.
ಆಮ್ ಆದ್ಮಿ ಪಾರ್ಟಿಯ ನಾಯಕ ಕ್ರೂಜ್ ಸಿಲ್ವಾ ಕೂಡ ಸವಾಯ್ಕರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ‘ಗೆದ್ದಲು’ ಅಥವಾ ‘ಜಿರಳೆ’ಗಳಿಗೆ ಹೋಲಿಸುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಅವಹೇಳನಗೊಳಿಸುವ ಮೂಲಕ ಆಡಳಿತಾರೂಢ ಪಕ್ಷ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.