ಹೊಸದಿಲ್ಲಿ, ಮೇ 22 : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆ ವಿರುದ್ಧ ಆರಂಭಗೊಂಡಿದ್ದ ಕಾಕ್ರೋಚ್ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೀಗ ಅದರ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡುವ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ ಎಂಬ ಆರೋಪದಡಿ ಕೇಂದ್ರ ಸರಕಾರದ ಸೂಚನೆಯಂತೆ ಗುರುವಾರ ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಖಾತೆ ತಡೆಹಿಡಿಯುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಕ್ಸ್ಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಜನರಲ್ಲಿ ಈ ಖಾತೆಗೆ ವೇಗವಾಗಿ ಜನಪ್ರಿಯತೆ ಹೆಚ್ಚುತ್ತಿದ್ದು, ಅದು ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾತೆಯ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಏರಿಕೆಯಾಗುತ್ತಿತ್ತು. ಸುಮಾರು 90 ಸಾವಿರ ಅನುಯಾಯಿಗಳಾಗುತ್ತಿದ್ದಂತೆಯೇ ಖಾತೆ ತಡೆಹಿಡಿಯುವಂತೆ ಎಕ್ಸ್ಗೆ ಮನವಿ ಮಾಡಲಾಗಿತ್ತು. ಗುರುವಾರ ಸಂಜೆ ವೇಳೆಗೆ ಜಾಗತಿಕವಾಗಿ 2 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಖಾತೆ ಹೊಂದಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಖಾತೆ ನಿರ್ಬಂಧಗೊಂಡಿದ್ದರೂ, ಎಕ್ಸ್ನ ನಿಯಮಾವಳಿಗಳ ಪ್ರಕಾರ ಇತರ ದೇಶಗಳಲ್ಲಿ ಅದನ್ನು ವೀಕ್ಷಿಸಲು ಅವಕಾಶ ಇದೆ ಎನ್ನಲಾಗಿದೆ.
ಇನ್ಸ್ಟಾಗ್ರಾಂ ಖಾತೆಯನ್ನು ಇನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿಲ್ಲ. ಆದರೆ, ಅದನ್ನು ತಡೆಹಿಡಿಯುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ ಆ ಖಾತೆಗೆ 16 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದರು ಎಂದು ವರದಿಯಾಗಿದೆ.
ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷ ಖಾತೆ ತಡೆಹಿಡಿಯಲಾಗಿದೆ ಎಂದು ದಿಪ್ಕೆ ಗುರುವಾರ ಮಧ್ಯಾಹ್ನ ಪೋಸ್ಟ್ ಮಾಡಿದ್ದರು. ಕೆಲವೇ ಗಂಟೆಗಳ ಬಳಿಕ ಕಾಕ್ರೋಚ್ ಇಸ್ ಬ್ಯಾಕ್ ಎಂಬ ಹೊಸ ಖಾತೆ ಆರಂಭಿಸಿರುವುದಾಗಿ ಘೋಷಿಸಿದ್ದರು.
30 ವರ್ಷದ ದಿಪ್ಕೆ ಮೂಲತಃ ಮಹಾರಾಷ್ಟ್ರದವರಾಗಿದ್ದು, ಪ್ರಸ್ತುತ ಅಮೆರಿಕದ ಬೋಸ್ಟನ್ನಲ್ಲಿ ನೆಲೆಸಿದ್ದಾರೆ. ಭಾರತದ ನಿರುದ್ಯೋಗಿ ಯುವಕರ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ನೀಡಿದ್ದ ಹೇಳಿಕೆಗಳ ಬಳಿಕ ಈ ವಿಡಂಬನಾ ಖಾತೆ ಆರಂಭಿಸಲಾಗಿತ್ತು. ಆ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.