ಹೊಸದಿಲ್ಲಿ, ಆ. 1: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಾಖಲೆ ಮಟ್ಟಕ್ಕೆ ಏರಿದ ಸಂದರ್ಭದಲ್ಲೂ ದೇಶದಲ್ಲಿ ಪೆಟ್ರೋಲ್ ದರವನ್ನು ನಿಯಂತ್ರಣದಲ್ಲಿ ಇಡಲು ಇಂಧನದಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ (ಇ–20) ಮಾಡುವ ಕೇಂದ್ರ ಸರ್ಕಾರದ ನೀತಿಯೇ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 135 ಡಾಲರ್ಗೆ ಏರಿದ್ದ ವೇಳೆ ಎಥೆನಾಲ್ ಮಿಶ್ರಣ ಇರದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ಗೆ ಸುಮಾರು 125 ರೂಪಾಯಿವರೆಗೆ ತಲುಪುವ ಸಾಧ್ಯತೆ ಇತ್ತು. ಆದರೆ, ದೇಶೀಯವಾಗಿ ನಿಗದಿತ ದರದಲ್ಲಿ ಲಭ್ಯವಾಗುವ ಶೇ. 20ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ಗೆ ಬೆರೆಸಿದ ಪರಿಣಾಮ ಗ್ರಾಹಕರು ಕಡಿಮೆ ದರದಲ್ಲಿ ಇಂಧನ ಖರೀದಿಸಲು ಸಾಧ್ಯವಾಯಿತು. ಇದರಿಂದ ಸಂಕಷ್ಟದ ಅವಧಿಯಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ಲೀಟರ್ಗೆ ಸರಿಸುಮಾರು 30 ರೂಪಾಯಿಯಷ್ಟು ಉಳಿತಾಯವಾಗಿದೆ ಎಂದು ಸಚಿವಾಲಯ ವಿವರಿಸಿದೆ.
ಎಥೆನಾಲ್ ಉತ್ಪಾದನೆಗಾಗಿ ಬಡವರ ಆಹಾರ ಧಾನ್ಯಗಳು ಅಥವಾ ಭಾರತೀಯ ಆಹಾರ ನಿಗಮದ (ಎಫ್ಸಿಐ) ಸಬ್ಸಿಡಿ ಅಕ್ಕಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳನ್ನೂ ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ. ಆಹಾರ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲೇ ಎಥೆನಾಲ್ ಉತ್ಪಾದನೆಗೆ ಕಚ್ಚಾ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಅದು ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಸತತ 75 ದಿನಗಳ ಕಾಲ ತೀವ್ರ ಏರಿಳಿತ ಕಂಡುಬಂದರೂ ದೇಶದಲ್ಲಿ ಚಿಲ್ಲರೆ ಇಂಧನ ದರಗಳನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಸಾಧ್ಯವಾಯಿತು ಎಂದು ಸಚಿವಾಲಯ ಹೇಳಿದೆ. ಬಳಿಕ ಮೇ ತಿಂಗಳಲ್ಲಿ ಪೆಟ್ರೋಲ್ ದರವನ್ನು ಲೀಟರ್ಗೆ 7.50 ರೂಪಾಯಿಯಷ್ಟು ಪರಿಷ್ಕರಿಸಲಾಗಿತ್ತು.
ಪ್ರಸ್ತುತ ಬೆಳಗಾವಿಯಲ್ಲಿ ಸಾಮಾನ್ಯ ಇ–20 (91 ಆಕ್ಟೇನ್) ಪೆಟ್ರೋಲ್ ದರ ಲೀಟರ್ಗೆ 112.06 ರೂಪಾಯಿ ಇದೆ.
