ಡೆಹ್ರಾಡೂನ್, ಜುಲೈ 28: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೇವಲ 17 ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಡೆಹ್ರಾಡೂನ್ನ ಸೇತುವೆಯನ್ನು ಸಂಪರ್ಕಿಸುವ ರಸ್ತೆ ಕುಸಿದಿದೆ. ಟನ್ಸ್ ನದಿಗೆ ಅಡ್ಡಲಾಗಿ ಪ್ರೇಮ್ನಗರದ ನಂದ್ ಕಿ ಚೌಕಿ ಬಳಿ ಸುಮಾರು ₹16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಸಂಪರ್ಕ ರಸ್ತೆ ಹಾನಿಗೊಳಗಾಗಿದ್ದು, ಡೆಹ್ರಾಡೂನ್–ಪವೋಂತಾ ಸಾಹಿಬ್ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ವರ್ಷದ ಮಳೆಯಲ್ಲಿ ಕೊಚ್ಚಿಹೋಗಿದ್ದ ರಸ್ತೆಗೆ ಬದಲಿಯಾಗಿ ನಿರ್ಮಿಸಲಾದ ಈ ಸಂಪರ್ಕ ರಸ್ತೆಯನ್ನು ಜುಲೈ 12ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಭಾಗ ಮಾತ್ರ ಕುಸಿದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ 24 ಗಂಟೆಯ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲಾಗಿದ್ದು, ದುರಸ್ತಿ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಚೌಹಾಣ್ ತಿಳಿಸಿದ್ದಾರೆ.
"ಸೇತುವೆ ಸುರಕ್ಷಿತವಾಗಿದೆ. ಸಂಪರ್ಕ ರಸ್ತೆಯ ಹಾನಿಗೊಳಗಾದ ಭಾಗವನ್ನು ಶೀಘ್ರದಲ್ಲೇ ಮರುನಿರ್ಮಿಸಿ ಸಂಚಾರ ಪುನಃ ಆರಂಭಿಸಲಾಗುವುದು" ಎಂದು ಅವರು ಹೇಳಿದ್ದಾರೆ.
ಈ ಘಟನೆ ಡೆಹ್ರಾಡೂನ್, ವಿಕಾಸ್ನಗರ ಹಾಗೂ ನೆರೆಯ ಹಿಮಾಚಲ ಪ್ರದೇಶದ ನಡುವಿನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟುಮಾಡಿದೆ.
