ಹೊಸದಿಲ್ಲಿ, ಮೇ 22 : ಕರ್ನಾಟಕದ 4 ಸ್ಥಾನಗಳು ಸೇರಿದಂತೆ ದೇಶದ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಎನ್ಡಿಎ ಹಾಗೂ ವಿರೋಧ ಪಕ್ಷಗಳ ಬಲಾಬಲದ ಲೆಕ್ಕಾಚಾರಕ್ಕೆ ಈ ಚುನಾವಣೆ ಮಹತ್ವ ಪಡೆದಿದೆ.
ಮಹಾರಾಷ್ಟ್ರದ ಎನ್ಸಿಪಿ ನಾಯಕಿ ಸುನೇತ್ರಾ ಪವಾರ್ ಹಾಗೂ ತಮಿಳುನಾಡಿನ ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ರಾಜೀನಾಮೆಯಿಂದ ತೆರವಾದ 2 ಸ್ಥಾನಗಳಿಗೆ ಇದೇ ದಿನ ಉಪಚುನಾವಣೆಯೂ ನಡೆಯಲಿದೆ.
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ರಾಜ್ಯಸಭೆ ಪ್ರವೇಶ ಪಡೆಯುತ್ತದೆಯೇ ಅಥವಾ ಮಿತ್ರಪಕ್ಷ ಕಾಂಗ್ರೆಸ್ಗೆ ಅವಕಾಶ ನೀಡುತ್ತದೆಯೇ ಎಂಬ ಕುತೂಹಲವೂ ಮೂಡಿದೆ.
ಮುಂದಿನ ತಿಂಗಳು ನಿವೃತ್ತಿಯಾಗಲಿರುವ ಪ್ರಮುಖ ಸದಸ್ಯರಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಕೇಂದ್ರ ಸಚಿವರಾದ ಜಾರ್ಜ್ ಕುರಿಯನ್ ಹಾಗೂ ರವನೀತ್ ಸಿಂಗ್ ಬಿಟ್ಟು ಸೇರಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗುಜರಾತ್ನಲ್ಲಿ ತಲಾ 4 ಸ್ಥಾನಗಳಿಗೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ 3 ಸ್ಥಾನಗಳಿಗೆ, ಜಾರ್ಖಂಡ್ನಲ್ಲಿ 2 ಸ್ಥಾನಗಳಿಗೆ ಹಾಗೂ ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಶಾಸಕರು ಪಕ್ಷಾತೀತವಾಗಿ ಮತ ಚಲಾಯಿಸಿದರೆ ಎನ್ಡಿಎ ತನ್ನ ಬಲವನ್ನು 15ರಿಂದ 17 ಸ್ಥಾನಗಳಿಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ವಿರೋಧ ಪಕ್ಷಗಳ ಸಂಖ್ಯೆಯೂ 5ರಿಂದ 7ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.
ಲೋಕಸಭಾ ಚುನಾವಣೆಯ ಬಳಿಕ ವೈಎಸ್ಆರ್ ಕಾಂಗ್ರೆಸ್ ತನ್ನ 3 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.