ರಾಮನಗರ, ಸೆ. 15 : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣನನ್ನು ಮುಗಿಸಿ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ರಾಜಕೀಯವಾಗಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
‘ನೈಸ್ ಹಾಗೂ ಕೆಪಿಎಸ್ಸಿ ಹಗರಣಗಳನ್ನು ಮುಚ್ಚಿಹಾಕಲು ಪ್ರಜ್ವಲ್ ವಿಷಯವನ್ನು ಮುನ್ನೆಲೆಗೆ ತರಲಾಗಿದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿದ ಬಾಲಕೃಷ್ಣ, ಪ್ರಜ್ವಲ್ ಪ್ರಕರಣಕ್ಕೂ ಈ ಪ್ರಕರಣಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿ ಈ ರೀತಿ ಮಾತನಾಡಿಯೇ ಪ್ರಜ್ವಲ್ನನ್ನು ಜೈಲಿಗೆ ಕಳುಹಿಸಿದರು. ಈಗ ಪ್ರಜ್ವಲ್ನನ್ನು ಮುಗಿಸಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಜೈಲಿನಲ್ಲಿರುವ ಪ್ರಜ್ವಲ್ಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿತು ಎಂಬುದರ ಕುರಿತು ತನಿಖೆ ನಡೆಸುವಂತೆ ಕುಮಾರಸ್ವಾಮಿ ಸಿಬಿಐಗೆ ಪತ್ರ ಬರೆಯಲಿ’ ಎಂದು ಸವಾಲು ಹಾಕಿದರು.
ಪ್ರಜ್ವಲ್ ಪ್ರಕರಣವನ್ನು ಮತ್ತೆ ಕೆದಕಿ ಆತನನ್ನು ಜೈಲಿನಲ್ಲಿಯೇ ಇರಿಸಬೇಕೆಂಬ ಉದ್ದೇಶ ಕುಮಾರಸ್ವಾಮಿ ಅವರಿಗಿದೆ ಎಂದು ಬಾಲಕೃಷ್ಣ ಆರೋಪಿಸಿದರು.
‘ದೇವೇಗೌಡರ ಕುಟುಂಬವನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ವಿರೋಧಿಗಳನ್ನು ಯಾರೂ ಬೆಳೆಸುವುದಿಲ್ಲ. ಕುಮಾರಸ್ವಾಮಿ ಪದೇಪದೇ ಭಾವನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದ ತಕ್ಷಣ ಒಕ್ಕಲಿಗರು ತಮ್ಮ ಪರ ನಿಲ್ಲುತ್ತಾರೆ ಎಂಬ ಭಾವನೆಯಿಂದ ಹೊರಬಂದು ರಾಜಕಾರಣ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
‘ಎದೆ ಗಟ್ಟಿ ಇಟ್ಟುಕೊಂಡಿದ್ದೆವು’
‘ನಾನು ವಿದೇಶದಿಂದ ವಾಪಸಾಗುವವರೆಗೆ ಯಾರೂ ನಿದ್ದೆ ಮಾಡಿಲ್ಲ’ ಎಂಬ ಕುಮಾರಸ್ವಾಮಿ ಹೇಳಿಕೆಯನ್ನೂ ಬಾಲಕೃಷ್ಣ ವ್ಯಂಗ್ಯವಾಡಿದರು. ‘ಅವರು ಬರುವವರೆಗೆ ಎದೆ ಗಟ್ಟಿ ಇಟ್ಟುಕೊಂಡಿದ್ದೆವು. ಅವರು ಹಾಕುವ ಬಾಂಬ್ ಎಲ್ಲಿ ಸದ್ದು ಮಾಡುತ್ತದೆಯೋ ಎಂಬ ಭಯವಿತ್ತು. ಈಗ ನೆಮ್ಮದಿಯಾಗಿ ನಿದ್ರಿಸುತ್ತೇವೆ’ ಎಂದು ಲೇವಡಿ ಮಾಡಿದರು.
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ರಾಜ್ಯದ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ತರಲಿ. ಅದಕ್ಕೆ ಅಗತ್ಯವಾದ ಜಾಗವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಬಾಲಕೃಷ್ಣ ಹೇಳಿದರು.