LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆ: ಗೋವಾ ಸರಕಾರಿ ನೌಕರನ ಬಂಧನ, ನಾಲ್ವರು ಪರಾರಿ

ಜೊಯಿಡಾ: ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ವನ್ಯಜೀವಿಗಳ ಬೇಟೆಯಾಡುತ್ತಿದ್ದ ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ನೌಕರನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಬೊಂಡೇಲಿ ಗ್ರಾಮದ ಸಮೀಪ ಈ ಕಾರ್ಯಾಚರಣೆ ನಡೆದಿದೆ.

ಭಾನುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ, ಬೇಟೆಯಲ್ಲಿ ತೊಡಗಿದ್ದ ಐವರ ಪೈಕಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ನಿಗಮದ ಮೆಕ್ಯಾನಿಕ್ ಜಯೇಂದ್ರ ದಿಗಂಬರ್ ಗಾವ್ಡೆ (45) ಎಂದು ಗುರುತಿಸಲಾಗಿದೆ.

ಆರೋಪಿಯ ವಿಚಾರಣೆ ವೇಳೆ, ಬೇಟೆಗೆ ಬಳಸಲಾದ ಬಂದೂಕಿನ ಮಾಲೀಕ ಎನ್ನಲಾದ ಸುಭಾಷ್ ಮಿರಾಶಿ ಸೇರಿದಂತೆ ಗೋವಾದ ಮೂವರು ಹಾಗೂ ಮತ್ತೊಬ್ಬ ಸ್ಥಳೀಯ ವ್ಯಕ್ತಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ತೀವ್ರಗೊಳಿಸಿದೆ.

ದಾಳಿಯ ವೇಳೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಶೆಡ್ಯೂಲ್-II ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿರುವ ಮರಬೆಕ್ಕಿನ (Palm Civet) ಕಳೇಬರವನ್ನು ವಶಪಡಿಸಿಕೊಂಡಿದ್ದಾರೆ. ಮರಬೆಕ್ಕನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಉಡ ಹಾಗೂ ಕಸ್ತೂರಿ ಜಿಂಕೆಯದ್ದೆಂದು ಶಂಕಿಸಲಾದ ಮಾಂಸವನ್ನೂ ವಶಪಡಿಸಿಕೊಳ್ಳಲಾಗಿದ್ದು, ನಿಖರ ಗುರುತಿಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೇಟೆಗೆ ಬಳಸಲಾಗಿದ್ದ ಬಂದೂಕನ್ನು ಸಹ ಜಪ್ತಿ ಮಾಡಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರಕರಣವನ್ನು ದುರ್ಬಲಗೊಳಿಸಲು ಗೋವಾದಿಂದ ಒತ್ತಡ ತರಲಾಗುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಗೋವಾ ಗಡಿಗೆ ಹೊಂದಿಕೊಂಡಿರುವ, ಕೇವಲ 60 ಮನೆಗಳಿರುವ ಬೊಂಡೇಲಿ ಗ್ರಾಮ ಅಕ್ರಮ ಬೇಟೆಗಾರರ ಚಟುವಟಿಕೆಗಳಿಗೆ ತಾಣವಾಗುತ್ತಿದೆ ಎಂಬ ಕಳವಳವನ್ನು ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ವ್ಯಕ್ತಪಡಿಸಿದ್ದು, ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಎಸ್‌ಎಸ್‌ ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್‌ ಕಾರಣ: ಅಶೋಕ ಗೆಹಲೋತ್‌ದುರಹಂಕಾರ ಬಿಟ್ಟು ದೇಶದ ಕಾನೂನು ಪಾಲಿಸಿ: ಪ್ರಿಯಾಂಕ್ ಖರ್ಗೆ ಪುನರುಚ್ಛಾರನಗರಗಳಷ್ಟೇ ಅಲ್ಲ, ಗ್ರಾಮಗಳಲ್ಲೂ ಆರೋಗ್ಯ ಸೇವೆ ನೀಡಿ: ವೈದ್ಯರಿಗೆ ಡಿ.ಕೆ.ಶಿವಕುಮಾರ ಸಲಹೆರಕ್ಷಣಾ ಸಚಿವರ ನಿವಾಸದಲ್ಲಿ ಆರ್‌ಎಸ್‌ಎಸ್-ಬಿಜೆಪಿ ಸಭೆಟಿಪ್ಪರ್–ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಢಿಕ್ಕಿ: 3 ಸಾವು, 10 ಮಂದಿಗೆ ಗಂಭೀರ ಗಾಯಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆ: ಗೋವಾ ಸರಕಾರಿ ನೌಕರನ ಬಂಧನ, ನಾಲ್ವರು ಪರಾರಿಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರಶಾಲೆಯಲ್ಲೇ ಕುಸಿದು ಬಿದ್ದು 6 ವರ್ಷದ ವಿದ್ಯಾರ್ಥಿ ಸಾವುಅಮೆರಿಕ-ಇರಾನ್ ಶಾಂತಿ ಒಪ್ಪಂದ: ಸುರಕ್ಷಿತವಾಗಿ ಹಾರ್ಮುಜ್ ದಾಟಿದ ಭಾರತದ ಮೊದಲ LNG ನೌಕೆಅಮೆರಿಕ–ಇರಾನ್ ಒಪ್ಪಂದ ನಮಗೆ ಅನ್ವಯವಲ್ಲ: ಇಸ್ರೇಲ್ ಮತ್ತೆ ಕ್ಯಾತೆ