ಚೆನ್ನೈ, ಮೇ 13 : ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸರ್ಕಾರದ ಪರವಾಗಿ 144 ಶಾಸಕರು ಮತ ಚಲಾಯಿಸಿದ್ದು, ಕೇವಲ 22 ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಟಿವಿಕೆ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಮ್ ಲೀಗ್, ವಿಸಿಕೆ ಸೇರಿದಂತೆ ಮೈತ್ರಿಕೂಟದ 118 ಶಾಸಕರ ಜೊತೆ ಎಐಎಡಿಎಂಕೆಯ 26 ಬಂಡಾಯ ಶಾಸಕರು ಹಾಗೂ ಎಎಂಎಂಕೆಯ 1 ಶಾಸಕ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದರು. ಇದರೊಂದಿಗೆ ಸರ್ಕಾರದ ಸಂಖ್ಯಾಬಲ ಮತ್ತಷ್ಟು ಗಟ್ಟಿಯಾಯಿತು.
ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ತಕ್ಷಣ ಮುಖ್ಯಮಂತ್ರಿ ವಿಜಯ್ ನಿರ್ಣಯ ಮಂಡಿಸಿದರು. ಬಳಿಕ ವಿವಿಧ ಪಕ್ಷಗಳ ಶಾಸಕರು ಚರ್ಚೆಯಲ್ಲಿ ಭಾಗವಹಿಸಿದರು. ವಿಭಾಗವಾರು ಮತದಾನ ನಡೆಸಿದ ನಂತರ ಸ್ಪೀಕರ್ ಜೆಸಿಡಿ ಪ್ರಭಾಕರ್ ಫಲಿತಾಂಶ ಘೋಷಿಸಿದರು.
ಡಿಎಂಕೆ ಮತ್ತು ಪಿಎಂಕೆ ಸದಸ್ಯರು ಮತದಾನಕ್ಕೂ ಮುನ್ನ ಸದನದಿಂದ ಹೊರನಡೆದರು. ಬಿಜೆಪಿ ಶಾಸಕೊಬ್ಬರು ಮತದಾನದಿಂದ ದೂರ ಉಳಿದರು. ಸಭೆಯಲ್ಲಿ ಹಾಜರಿದ್ದ 22 ಎಐಎಡಿಎಂಕೆ ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಿದರು.
234 ಸದಸ್ಯರ ವಿಧಾನಸಭೆಯಲ್ಲಿ ಸಾಮಾನ್ಯವಾಗಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ಆದರೆ ತಿರುಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮದ್ರಾಸ್ ಹೈಕೋರ್ಟ ಸೂಚನೆ ನೀಡಿದ್ದರಿಂದ ಸದನದ ಬಲ 232ಕ್ಕೆ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಹುಮತಕ್ಕೆ 116 ಶಾಸಕರ ಬೆಂಬಲ ಸಾಕಾಗಿತ್ತು.
ವಿಶ್ವಾಸಮತದಲ್ಲಿ ಜಯಗಳಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ವಿಜಯ್, ಸರ್ಕಾರಕ್ಕೆ ಬೆಂಬಲ ನೀಡಿದ ಎಲ್ಲಾ ಶಾಸಕರಿಗೂ ಧನ್ಯವಾದ ತಿಳಿಸಿದರು. ನಮ್ಮದು ಮೈತ್ರಿಕೂಟ ಸರ್ಕಾರ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ. ಜಾತಿ, ಧರ್ಮ ಬೇಧವಿಲ್ಲದೆ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಮಗೆ ಯಾರ ಮೇಲೂ ದ್ವೇಷವಿಲ್ಲ. ದ್ವೇಷ ರಾಜಕಾರಣ ಮಾಡುವುದಿಲ್ಲ. ಮತ ಹಾಕಿದವರು, ಹಾಕದವರು ಎಂಬ ಭೇದಭಾವವೂ ಇರುವುದಿಲ್ಲ. ಪೆರಿಯಾರ್, ಕಾಮರಾಜ್, ಅಂಬೇಡ್ಕರ್ ತತ್ವಗಳಡಿ ಆಡಳಿತ ನಡೆಸುತ್ತೇವೆ ಎಂದು ವಿಜಯ್ ಹೇಳಿದರು.
ಇನ್ನೊಂದೆಡೆ ವಿಶ್ವಾಸಮತ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ ಕೇವಲ 1.72 ಕೋಟಿ ಮತಗಳು ಮಾತ್ರ ಟಿವಿಕೆಗೆ ಬಂದಿವೆ. ಉಳಿದ ಜನರು ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.