
ಹುಬ್ಬಳ್ಳಿ, ಜು.2: ಚಲಿಸುತ್ತಿದ್ದ ಬಸ್ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ 17 ವರ್ಷದ ಐಟಿಐ ವಿದ್ಯಾರ್ಥಿಯೊಬ್ಬನ ತಲೆಗೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ರುಂಡ ಹಾಗೂ ಮುಂಡ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿರುವ ಬೆಚ್ಚಿಬೀಳಿಸುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕೊಪ್ಪದ ಕೆರೆಯ ಸಮೀಪದ ಹುಬ್ಬಳ್ಳಿ–ಲಕ್ಷ್ಮೇಶ್ವರ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಕ್ಷಣಾರ್ಧದಲ್ಲಿ ನಡೆದ ಈ ಭೀಕರ ಅವಘಡವನ್ನು ಕಣ್ಣಾರೆ ಕಂಡ ಬಸ್ ಪ್ರಯಾಣಿಕರು ಹಾಗೂ ಸ್ಥಳೀಯರು ನಡುಗಿ ಹೋಗಿದ್ದು, ಕೆಲ ಮಹಿಳೆಯರು ಸ್ಥಳದಲ್ಲೇ ಕಣ್ಣೀರು ಹಾಕಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ಎಂದು ಗುರುತಿಸಲಾಗಿದೆ. ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ನಿವಾಸಿಯಾಗಿದ್ದ ಆತ ಐಟಿಐ ವ್ಯಾಸಂಗ ಮಾಡುತ್ತಿದ್ದನು. ಪ್ರತಿದಿನದಂತೆ ವಿದ್ಯಾಭ್ಯಾಸ ಮುಗಿಸಿ ಸ್ವಗ್ರಾಮಕ್ಕೆ ತೆರಳಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಬುಧವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆಎ–26 ಎಫ್–1039 ಸಂಖ್ಯೆಯ ಸಾರಿಗೆ ಬಸ್ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರದತ್ತ ಸಂಚರಿಸುತ್ತಿತ್ತು. ಬಸ್ ಕುಂದಗೋಳ ಪಟ್ಟಣ ದಾಟಿ ಕೊಪ್ಪದ ಕೆರೆಯ ಸಮೀಪ ತಲುಪಿದಾಗ, ಹಿಂಬದಿಯ ಆಸನದಲ್ಲಿ ಕುಳಿತಿದ್ದ ಫಕ್ಕೀರೇಶ ಬಾಯಲ್ಲಿದ್ದ ಗುಟ್ಕಾವನ್ನು ಉಗುಳಲು ಕಿಟಕಿಯಿಂದ ತಲೆ ಹೊರಹಾಕಿದ್ದಾನೆ.
ಅದೇ ಸಮಯದಲ್ಲಿ ಎಂ–ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಕೆಎ–04 ಎಡಿ–7218 ಸಂಖ್ಯೆಯ ಟಿಪ್ಪರ್ ಲಾರಿಯು ಬಸ್ ಅನ್ನು ಓವರ್ಟೇಕ್ ಮಾಡಲು ಮುಂದಾಗಿದೆ. ಲಾರಿ ಬಸ್ನ ಪಕ್ಕದಿಂದ ವೇಗವಾಗಿ ಹಾದು ಹೋಗುವ ವೇಳೆ ವಿದ್ಯಾರ್ಥಿಯ ತಲೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಫಕ್ಕೀರೇಶನ ತಲೆ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟು ರಸ್ತೆ ಬದಿಗೆ ಎಸೆಯಲ್ಪಟ್ಟರೆ, ದೇಹ ಬಸ್ನ ಕಿಟಕಿಯ ಬಳಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದೆ. ಕ್ಷಣಾರ್ಧದಲ್ಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಘಟನೆಯ ಭೀಕರತೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಅಕ್ಷರಶಃ ಬೆಚ್ಚಿಬಿದ್ದರು. ಕೆಲವರು ಜೋರಾಗಿ ಕಿರುಚಿಕೊಂಡರೆ, ಮಹಿಳೆಯರು ಹಾಗೂ ಮಕ್ಕಳು ಭಯಭೀತರಾಗಿ ಅಳಲು ಆರಂಭಿಸಿದರು. ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ್ದು, ಪ್ರಯಾಣಿಕರು ಹೊರಬಂದು ನೋಡಿದಾಗ ರಸ್ತೆಯ ಮೇಲೆ ವಿದ್ಯಾರ್ಥಿಯ ರುಂಡ ಬಿದ್ದಿದ್ದ ದೃಶ್ಯ ಕಂಡು ಸ್ಥಳದಲ್ಲಿದ್ದವರ ಮನಕಲಕಿತು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಅಪಘಾತದಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡರು.
ಈ ಭೀಕರ ಅಪಘಾತವು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಎಚ್ಚರಿಕೆಯ ಮಹತ್ವವನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿದೆ. ಚಲಿಸುತ್ತಿರುವ ಬಸ್ ಅಥವಾ ಇತರೆ ವಾಹನಗಳ ಕಿಟಕಿಯಿಂದ ತಲೆ, ಕೈ ಅಥವಾ ದೇಹದ ಯಾವುದೇ ಭಾಗವನ್ನು ಹೊರಹಾಕುವುದು ಜೀವಕ್ಕೆ ಅಪಾಯಕಾರಿಯಾಗಬಹುದು. ಕ್ಷಣಿಕ ಅಜಾಗರೂಕತೆಯೂ ಜೀವಹಾನಿಗೆ ಕಾರಣವಾಗಬಹುದಾದ್ದರಿಂದ ಪ್ರಯಾಣಿಕರು ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಲಾಗಿದೆ