LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ: ದಲಿತ ಸಂಘಟನೆಗಳಿಗೆ ಪರಮೇಶ್ವರ ಭರವಸೆ

ಬೆಂಗಳೂರು, ಜುಲೈ 21: ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಮಂಗಳವಾರ ವಿವಿಧ ದಲಿತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ 72 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಕಾನೂನಿನ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಇದಲ್ಲದೆ, ಹಲವು ವರ್ಷಗಳಿಂದ ಖಾಲಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಿಟಿಸಿಎಲ್ ಕಾಯ್ದೆಗೆ ಹಲವು ವರ್ಷಗಳ ಬಳಿಕ ತಿದ್ದುಪಡಿ ತರಲಾಗಿದೆ. ದಲಿತ ಸಂಘಟನೆಗಳ ಬೇಡಿಕೆಯಂತೆ ‘ಪ್ರಾವಿಷನ್ ಡಿ’ಯನ್ನು ಕೈಬಿಡಲಾಗಿದೆ. ಆದರೆ, ಕಾಯ್ದೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಪ್ರಯೋಜನ ದಲಿತ ಸಮುದಾಯದ ಹಲವು ಮಹಿಳೆಯರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದಿವೆ. ಯಾವ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲಿಸಿ, ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಮಯಕ್ಕೆ ದೊರೆಯುತ್ತಿಲ್ಲ ಹಾಗೂ ಅದರ ಮೊತ್ತವೂ ಸಾಕಾಗುತ್ತಿಲ್ಲ ಎಂಬ ವಿಚಾರವನ್ನೂ ಸಂಘಟನೆಗಳು ಪ್ರಸ್ತಾಪಿಸಿವೆ. ಪ್ರಸ್ತುತ ನೀಡಲಾಗುತ್ತಿರುವ ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ನೈಜ ವೆಚ್ಚಕ್ಕೆ ಸಾಲುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಮುಂದಿನ ಬಜೆಟ್‌ನಲ್ಲಿ ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿವೇತನವನ್ನು ಆಯಾ ವಿಶ್ವವಿದ್ಯಾಲಯಗಳ ಶುಲ್ಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಬ್ಯಾಕ್‌ಲಾಗ್ ಹುದ್ದೆಗಳ ಮೂಲಕ ನೇರ ನೇಮಕಾತಿ ಹಾಗೂ ಉದ್ಯೋಗವಿಲ್ಲದೆ ಇರುವ ಆದಿವಾಸಿ ಸಮುದಾಯದ ಪಿಎಚ್‌ಡಿ ಪದವೀಧರರಿಗೆ ವಿಶೇಷ ನೇಮಕಾತಿ ಅವಕಾಶ ಕಲ್ಪಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಅಧೀನದಲ್ಲಿದೆ ಎನ್ನಲಾದ ಎಸ್‌ಸಿ, ಎಸ್‌ಟಿ ಸಮುದಾಯದ 150 ಎಕರೆ ಭೂಮಿ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬರಲಿದೆ. ಯಾರ ತಪ್ಪಿದೆ, ಯಾರದ್ದು ಸರಿ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಜಾತಿ ಪ್ರಮಾಣಪತ್ರ ವಿತರಣೆಯನ್ನು 21 ದಿನಗಳ ಒಳಗೆ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಇದರಿಂದ ಶಿಕ್ಷಣ ಮತ್ತು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಬಿಜೆಪಿ ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದು, ಕುಟುಂಬ ವಂಶಾವಳಿ ಪ್ರಮಾಣಪತ್ರ (ಪಿಆರ್‌ಸಿ) ನೀಡುವ ವ್ಯವಸ್ಥೆಯಿಂದ ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕಲು ಸಹಕಾರಿಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ಹುತಾತ್ಮರ ದಿನಾಚರಣೆಯಲ್ಲಿ ಕಳಸಾ–ಬಂಡೂರಿ ಯೋಜನೆಗೆ ವೇಗ ನೀಡುವಂತೆ ಆಗ್ರಹವಾಟ್ಸಪ್ ಮದುವೆ ಆಹ್ವಾನದ ಎಪಿಕೆ ಫೈಲ್ ಕ್ಲಿಕ್ ಮಾಡಿ ₹10 ಲಕ್ಷ ಕಳೆದುಕೊಂಡ ಅಧಿಕಾರಿಮುಖ್ಯಮಂತ್ರಿ ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ: ಡಿಎಚ್ಒಗೆ ಶೋಕಾಸ್ ನೋಟಿಸ್ಗಡಿ ಕನ್ನಡ ಶಾಲೆಗಳ ದುಸ್ಥಿತಿಗೆ ತುರ್ತು ಸ್ಪಂದನೆ ಅಗತ್ಯ: ಸಮಿತಿ ಶಿಫಾರಸುಪ್ರಧಾನಿ ನಿವಾಸದ ಎದುರು ಕಾಂಗ್ರೆಸ್‌ ಧರಣಿ: ರಾಹುಲ್ ಸೇರಿ ವಿಪಕ್ಷ ನಾಯಕರು ಪೊಲೀಸ ವಶಕ್ಕೆಪ್ರತಿಭಟನಾಕಾರರಿಗೆ ಎಎಪಿ ನೆರವು: ಕಾನೂನು, ವೈದ್ಯಕೀಯ ಸಹಾಯಕ್ಕೆ ಸಹಾಯವಾಣಿ ಆರಂಭ112ಗೆ ಕರೆ ಬಂದರೆ ಠಾಣೆ ವ್ಯಾಪ್ತಿಯ ನೆಪ ಬೇಡವಿದ್ಯಾರ್ಥಿಗಳ ಥಳಿತ ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ ಶಾ ಕ್ಷಮೆಯಾಚಿಸಲಿಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿದೆಹಲಿ ಪೊಲೀಸರ ಲಾಠಿ ಪ್ರಹಾರದಲ್ಲಿ ಗಾಯಗೊಂಡ ಯುವತಿ ವೆಂಟಿಲೇಟರ್‌ನಲ್ಲಿ; ಸ್ಥಿತಿ ಗಂಭೀರ